ಮಳೆ ಬರದಿದ್ದರೆ ವಿದ್ಯುತ್ ದರ ಹೆಚ್ಚಳ : ಈಶ್ವರಪ್ಪ
ದೇಶಾದ್ಯಂತ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಇಂಧನ ಮಂತ್ರಿ ಈಶ್ವರಪ್ಪ ಹಾಗೂ ಸಿಎಂ ಯಡಿಯೂರಪ್ಪ ವಿವಿಧ ಪ್ರದೇಶದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಉತ್ತರಿಸಿದರು. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಕೆಲವಡೆ ಸಾಧಾರಣ ಮಳೆ ಬಿದ್ದಿದೆ. ಇನ್ನೂ ಕೆಲವಡೆ ರೈತರು ಮಳೆ ಮುಖವನ್ನು ನೋಡಿಲ್ಲ. ಇದರಿಂದ ಜಲಾಶಯದ ಮಟ್ಟ ದಿನದಿಂದ ದಿನಕ್ಕೆ ಕುಸಿಯತೊಡಗಿದೆ. ಬಳ್ಳಾರಿ ಮತ್ತು ರಾಯಚೂರು ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಮುಂದುವರಿದಿದೆ. ರಾಜ್ಯದ ಎಲ್ಲ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಮಾಡಿಕೊಳ್ಳಲಾಗಿದೆ. ಆದರೆ, ಮಳೆ ಕೊರತೆ ಉಂಟಾದಲ್ಲಿ ಅನಿವಾರ್ಯವಾಗಿ ವಿದ್ಯುತ್ ದರ ಏರಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.
ಇನ್ನೊಂದು ಕಡೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಳೆ ಬರಲಿದೆ ಎಂಬ ವಿಶ್ವಾಸವಿದೆ. ಭಗವಂತನ ಪ್ರಾರ್ಥನೆ ಮಾಡುವುದು ಮಾತ್ರ ನಮ್ಮ ಕೆಲಸ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ರಾಜ್ಯದಲ್ಲಿ ಉತ್ತಮ ಮಳೆ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಮಳೆ ಪ್ರಮಾಣ ಕಡಿಮೆಯಾದಲ್ಲಿ ಆ ಬಗ್ಗೆ ನಂತರ ಚಿಂತನೆ ನಡೆಸಲಾಗುವುದು. ಸದ್ಯಕ್ಕೆ ಮಳೆ ಬರಲಿದೆ ಎಂಬ ವಿಶ್ವಾಸವಿದೆ. ದೇವರಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)