2011ಕ್ಕೆ ಜೆಡಿಸ್ ಅಧಿಕಾರಕ್ಕೆ : ದೇವೇಗೌಡ
ರಾಜ್ಯದಲ್ಲಿ 2011 ಕ್ಕೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಾಣವಾಗಲಿದೆ ಎನ್ನುವ ಮೂಲಕ ಅವರು ಪರೋಕ್ಷವಾಗಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಇಂಗಿತವನ್ನು ವ್ಯಕ್ತಪಡಿಸಿದರು. ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಜೆಡಿಎಸ್ ಅಧಿಕಾರಕ್ಕೆ ಬರುವ ಕಾಲ ಕೂಡಿ ಬರಲಿದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.
ರಾಜಕೀಯದಲ್ಲಿ 50 ವರ್ಷ ಸಾಗಿ ಬಂದಿದ್ದೇನೆ. ಇನ್ನೂ ಐದು ವರ್ಷ ಸಾಗಬೇಕು ಎಂಬ ಬಯಕೆ ಇದೆ. ಆ ಶಕ್ತಿಯನ್ನು ದೇವರು ನೀಡುವ ವಿಶ್ವಾಸವಿದೆ. ಗಾಬರಿ ಬೀಳುವ ಅಗತ್ಯವಿಲ್ಲ. 125 ಸ್ಥಾನಗಳನ್ನು ಗಳಿಸುವ ಹಾಗೇ ಕಾರ್ಯಕರ್ತರನ್ನು ಕೆಲಸಕ್ಕೆ ಹಚ್ಚುವ ಸಾಮರ್ಥ್ಯ ನನಗಿದೆ. ಕುಮಾರಸ್ವಾಮಿ ಚಿಂತೆ ಮಾಡುವ ಅಗತ್ಯವಿಲ್ಲ. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು ಎಂಬ ಹಂಬಲವಿದೆ. ಪಕ್ಷಕ್ಕೆ ಏಟು ಬಿದ್ದಾಗ ಒಂದಾಗಿ ಸಿಡಿದೇಳಬೇಕು ಎಂಬುದು ಇದರ ಅರ್ಥ. ದೇವೇಗೌಡ ಹೋದ ನಂತರವೂ ಜೆಡಿಎಸ್ ಹೋಗುವುದಿಲ್ಲ, ಕುಮಾರಸ್ವಾಮಿಗೆ ಜೆಡಿಎಸ್ ಉಳಿಸುವ ಸಾಮರ್ಥ್ಯ ಇದೆ ಎಂದು ಗೌಡರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)