ಯುವಜನತೆಗೆ ರಕ್ಷಣಾ ಸೇವೆಯ ಬಗ್ಗೆ ತಿಳಿವಳಿಕೆ
ಬೆಂಗಳೂರು, ಜೂ. 12 : ಯುವಜನರನ್ನು ರಕ್ಷಣಾ ಸೇವೆಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರುವಂತೆ ತರಬೇತಿಗೊಳಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ, ಮುಖ್ಯ ನಿರ್ವಹಣಾಧಿಕಾರಿ, ಜಿಲ್ಲಾ ವಾರ್ತಾಧಿಕಾರಿಯನ್ನೊಳಗೊಂಡ ಸಮಿತಿ ರಚನೆ ಮಾಡಿ, ಜಿಲ್ಲಾ ಯುವಜನ ಸೇವಾ ಅಧಿಕಾರಿಯು ಇದಕ್ಕೆ ಸಮನ್ವಯಾಧಿಕಾರಿಯಾಗಿ ಯುವಕರಿಗೆ ರಕ್ಷಣಾ ಸೇವೆಯ ಪ್ರವೇಶ ಪರೀಕ್ಷೆಗೆ ಅಗತ್ಯವಾದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಕಾರ್ಯಕ್ರಮ ರೂಪಿಸುವ ವ್ಯವಸ್ಥೆ ಮಾಡುವ ಬಗ್ಗೆ ಯುವಜನ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ ಎಂ ವಿಠ್ಠಲಮೂರ್ತಿ ಅವರು ಇಂದು ನಡೆದ ವಾಯುದಳ ನೇಮಕಾತಿಗೆ ಕುರಿತಂತೆ ಸೆಪ್ಟೆಂಬರ್ ನಲ್ಲಿ ತುಮಕೂರಿನಲ್ಲಿ ನಡೆಸಲಿರುವ ರ್ಯಾಲಿ ಕುರಿತ ಸಿದ್ದತಾ ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ವ್ಯಾಪ್ತಿಯ ಕೇಬಲ್ ನೆಟ್ವರ್ಕ, ದೂರದರ್ಶನ, ರೇಡಿಯೋ ಮುಂತಾದ ಮಾಧ್ಯಮಗಳ ಮುಖಾಂತರ ಈ ವಿಷಯ ಕುರಿತಂತೆ ಸಂಕ್ಷಿಪ್ತ ಮಾಹಿತಿಯನ್ನು ಆಗಾಗ ಬಿತ್ತರಿಸುವುದು ಕೌಶಲ್ಯ ಯೋಜನೆಯಡಿ, ರಕ್ಷಣಾ ದಳದ ನೇಮಕಾತಿ ಕುರಿತಂತೆಯೇ ಪ್ರತ್ಯೇಕ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುವುದು ಉತ್ತಮವೆಂದು ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ಸೇವೆಗೆ ಸೇರುವವರ ಸಂಖ್ಯೆ ಕೇವಲ ಶೇ 5 ಇತರ ರಾಜ್ಯಗಳಿಗೆ ಹೋಲಿಸಿದಾಗ ವಾಯುದಳಕ್ಕಾಗಲಿ, ಸಶಸ್ತ್ರ ದಳಕ್ಕಾಗಲಿ ತಾಂತ್ರಿಕ ಹುದ್ದೆಗೆ ಅಥವಾ ತಾಂತ್ರಿಕೇತರ ಹುದ್ದೆಗಳಿಗಾಗಿ ಸೇರಲು ಮುಂದೆ ಬರುವ ಆಯ್ಕೆಯಾಗುವ ಯುವಕರ ಸಂಖ್ಯೆ ಅತ್ಯಂತ ಕಡಿಮೆ. ಯುವಕರಲ್ಲಿ ಸ್ಫೂರ್ತಿ ತುಂಬುವುದು, ರಕ್ಷಣಾ ದಳದಲ್ಲಿರುವ ವಿಶೇಷ ಅವಕಾಶ, ಸೌಲಭ್ಯಗಳ ತಿಳುವಳಿಕೆ, ಅದಕ್ಕಿಂತ ಮುಖ್ಯವಾಗಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಗತ್ಯವಾದ ತರಬೇತಿ, ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳ ಸ್ವರೂಪಿ, ಆಯ್ಕೆ ಪ್ರಕ್ರಿಯೆಯ ಬಗೆಗಿನ ತಿಳುವಳಿಕೆ ಕಡಿಮೆ ಕೊರತೆಯಿಂದ ಕರ್ನಾಟಕದಲ್ಲಿ ಈ ರೀತಿಯ ನೀರಸ ಪ್ರತಿಕ್ರಿಯೆಯಿರುವುದಾಗಿ ವಾಯುದಳ ಆಯ್ಕೆ ಕೇಂದ್ರದ ವಿಂಗ್ ಕಮಾಂಡರ್ ಎಂ. ಎ. ಅರಿಫ್-ಉರ್-ರಹೀಮ್ ಅವರು ತಿಳಿಸಿದರು. 2005 ರ್ಯಾಲಿಯಲ್ಲಿ ಉತ್ತೀರ್ಣಗೊಂಡವರ ಶೇಕಡಾವಾರು ಚೆನ್ನಾಗಿದೆ ಎಂದು ಸಹ ಅವರು ತಿಳಿಸಿದರು.
ಈ ಬಾರಿ ರಾಜ್ಯಮಟ್ಟದ ವಾಯುದಳದ ನೇಮಕಾತಿ ರ್ಯಾಲಿ ತುಮಕೂರಿನಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 23 ರಂದು ವಾಯುದಳದ ತಾಂತ್ರಿಕ ಹುದ್ದೆಗಳೆಗೆ ಮತ್ತು 25 ರಂದು ತಾಂತ್ರಿಕೇತರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಾದೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications