ಸಂಸತ್ ದಾಳಿ : ಅಫ್ಜಲ್ ಗುರುಗೆ ಗಲ್ಲೇಕೆ ?
ನವದೆಹಲಿ, ಜೂ. 12 : ಭಾರತದ ಹೃದಯ ಕೇಂದ್ರ ಸಂಸತ್ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರ ಮುಖಂಡ ಅಫ್ಜಲ್ ಗುರುನನ್ನು ಹೇಗಾದರು ಮಾಡಿ ಗಲ್ಲು ಶಿಕ್ಷೆಯಿಂದ ಪಾರು ಮಾಡಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಿವೆಯೇ? ದೇಶದ ಸರ್ವೋಚ್ಚ ನ್ಯಾಯಾಲಯದಿಂದ ನೇಣಿಗೇರಿಸಿ ಎಂದು ಆದೇಶ ಹೊರಬಿದ್ದು ಹಲವು ವರ್ಷಗಳು ಕಳೆದರೂ ಅಫ್ಜಲ್ ಗುರುಗೆ ಶಿಕ್ಷೆ ನೀಡಲು ಕೇಂದ್ರ ಸರಕಾರ ಮನಸ್ಸು ಮಾಡುತ್ತಿಲ್ಲ. ಗುರು ಸೇರಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಒಟ್ಟು 28 ಅಪರಾಧಿಗಳ ತಪ್ಪೊಪ್ಪಿಗೆ ಮನವಿ ರಾಷ್ಟ್ರಪತಿಗಳ ಬಳಿ ಇದೆ. ರಾಷ್ಟಪತಿಗಳಿಂದ ಆ ಮನವಿ ಸರಕಾರಕ್ಕೆ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ, ಸಂಸತ್ ಮೇಲೆ ದಾಳಿ ನಡೆಸಿರುವ ಉಗ್ರ ಅಫ್ಜಲ್ ಗುರು ತಪ್ಪೊಪ್ಪಿಗೆ ಮನವಿ ರಾಷ್ಟ್ರಪತಿಗಳ ಮುಂದೆ ಇದೆ. ಗುರು ಹಾಗೂ ಇಂದಿರಾ ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಅಪರಾಧಿಗಳು ಸೇರಿ 28 ಮಂದಿ ತಪ್ಪೊಪ್ಪಿಗೆ ಅರ್ಜಿ ರಾಷ್ಟ್ರಪತಿಗಳ ಮುಂದಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಉಗ್ರರನ್ನು ರಕ್ಷಣೆ ಮಾಡುವುದಾಗಲಿ, ಬೆಂಬಲಿಸುವುದಾಗಲಿ ಕೇಂದ್ರ ಸರಕಾರ ಮಾಡುತ್ತಿಲ್ಲ. ನಮಗೆ ನಮ್ಮದೇ ಆದ ಕಾನೂನು ಕಟ್ಟಳೆಗಳು ಇವೆ. ಅದನ್ನು ಉಲ್ಲಂಘನೆ ಮಾಡುವಂತಿಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆಯಬೇಕಾಗುತ್ತದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಕೂಡಾ ಅನೇಕ ಮಂದಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಭಾರತೀಯರೂ ಇದ್ದಾರೆ. ಅವರನ್ನು ಏಕಾಏಕಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗುತ್ತದೆಯೇ ಎಂದು ಮೊಯ್ಲಿ ಮರುಪ್ರಶ್ನಿಸಿದ್ದಾರೆ.
(ಏಜನ್ಸೀಸ್)