ಹರಗಿಹಾಳ ಕಾಡಿನಲ್ಲಿ ಮರ ಕಡಿಯುತ್ತಿದ್ದ 21 ಜನರ ಬಂಧನ
ಶಿಕಾರಿಪುರ, ಜೂ.10 : ಅಂಬ್ಲಿಗೊಳ ವಲಯ ಹರಗಿಹಾಳ ಅರಣ್ಯ ಪ್ರದೇಶದಲ್ಲಿ ಬಗರ್ಹುಕುಂ ಸಾಗುವಳಿಗಾಗಿ ಕಡಿತಲೆ ಮಾಡುತ್ತಿದ್ದ ಈಸೂರು ಗ್ರಾಮದ 21 ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದು, ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಇದರಿಂದ ರೊಚ್ಚಿಗೆದ್ದ ಈಸೂರು ಗ್ರಾಮಸ್ಥರು ಅರಣ್ಯ ಇಲಾಖೆ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿ, ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದರಿಂದಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ನಂತರ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರಾಜಪ್ಪ, ಎಸಿಎಫ್ ವೆಂಕಟೇಶ್ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರೂ ಫಲ ನೀಡಲಿಲ್ಲ.
ಅರಿಶಿನಗೆರೆ ಗ್ರಾಮದ ಸರ್ವೇ ನಂ.104ರಲ್ಲಿರುವ ಸುಮಾರು 100 ಎಕರೆ ಪ್ರದೇಶದ ಅರಣ್ಯ ಭೂಮಿಯಲ್ಲಿ ಈಸೂರಿನ ಗ್ರಾಮಸ್ಥರು ಕಳೆದ 3 ದಿನಗಳಿಂದ ಮರಗಿಡ ಕಡಿತಲೆ ಮಾಡಿ ಸಾಗುವಳಿಗಾಗಿ ಭೂಮಿಯನ್ನು ಸಿದ್ಧಪಡಿಸಿದ್ದರು. ವಿಷಯ ತಿಳಿದ ಕೂಡಲೇ ಎಸಿಎಫ್ ವೆಂಕಟೇಶ್ ಹಾಗೂ ವಲಯ ಅರಣ್ಯಾಧಿಕಾರಿ ಸುದರ್ಶನ್ ಕಾರ್ಯಾಚರಣೆ ನಡೆಸಿ, 3 ಮಹಿಳೆಯರು ಸೇರಿದಂತೆ ಒಟ್ಟು 21 ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಂಧಿತರನ್ನು ನ್ಯಾಯಾಧೀಶರು ಜೂನ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹರಿಗಿಹಾಳ ಅರಣ್ಯ ಪ್ರದೇಶ ಮೈನರ್ ಫಾರೆಸ್ಟ್ ಆಗಿರುವುದರಿಂದ ಬಗರ್ಹುಕುಂ ಸಾಗುವಳಿಗೆ ಬಿಡಲು ಸಾಧ್ಯವಿಲ್ಲ. 1929ರಲ್ಲಿ ಈ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.