ದೆಹಲಿಯಲ್ಲಿ ಈಶ್ವರಪ್ಪ ಉಗ್ರ ತಾಂಡವ ಶಾಂತ
ಶಿವಮೊಗ್ಗ ಪತ್ರಿಕಾಗೋಷ್ಠಿಯಲ್ಲಿ ತಾವು ಮಾತನಾಡುತ್ತಾ, ನೀತಿ, ಸಿದ್ದಾಂತಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಅದು ಬಿಟ್ಟು ಹಣ,ಹೆಂಡದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದ್ದೆ. ಅದನ್ನೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಪ್ಪಾಗಿ ಅರ್ಥೈಸಿ ಪ್ರಚಾರ ಮಾಡಿವೆ. ನನ್ನ ಹೇಳಿಕೆ ಬಗ್ಗೆ ತಪ್ಪು ಅರ್ಥ ನೀಡಲಾಗಿದೆ. ಕೆಲವೊಂದು ಪತ್ರಿಕೆಗಳು ನನ್ನ ಹೇಳಿಕೆಯನ್ನು ಹೀಗೆ ತಿರುಚಿ ಬರೆದಿವೆ ಎಂದು ಈಶ್ವರಪ್ಪ ಹೇಳಿದರು.
ಆದರೆ ಧಾರ್ಮಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಾ, ಶಿಕಾರಿಪುರಕ್ಕಿಂತಲೂ ಶಿವಮೊಗ್ಗದಲ್ಲಿ ಬಿಜೆಪಿ ಬಹಳಷ್ಟು ಅಂತರದಿಂದ ಗೆದ್ದಿದೆ ಎಂದಿದ್ದರು. ಆ ಹೇಳಿಕೆಯನ್ನು ತಾನು ಖಂಡಿಸಿದ್ದೆ. ಧಾರ್ಮಿಕ ಸಮ್ಮೇಳನದಲ್ಲಿ ಯಡಿಯೂರಪ್ಪ ಅದನ್ನು ಹೇಳುವ ಅವಶ್ಯಕತೆಯಾದರೂ ಏನಿತ್ತು. ಧಾರ್ಮಿಕ ಸಮಾರಂಭದಲ್ಲಿ ಅವರು ಹಾಗೆಮಾತನಾಡಬಾರದಿತ್ತು. ಈ ಮಾತಿಗೆ ತಾವು ಈಗಲೂ ಬದ್ಧ ಎಂದು ಈಶ್ವರಪ್ಪ ತಿಳಿಸಿದರು.
ಇಂದು ನನಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಂದ ಕರೆ ಬಂತು. ಅವರ ಬಳಿ ಈ ಬಗ್ಗೆ ಎಲ್ಲವನ್ನೂ ತಿಳಿಸಿದ್ದೇನೆ. ಈಶ್ವರಪ್ಪ ವಿರುದ್ಧ ಯಾವುದೇ ನೋಟೀಸ್ ಜಾರಿ ಮಾಡದಿರುವಂತೆ ಸದಾನಂದಗೌಡರಿಗೆ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಒಂದು ಮನೆ ಎಂದ ಮೇಲೆ ಅಣ್ಣ ತಮ್ಮಂದಿರ ನಡುವೆ ಜಗಳ ಬರುವುದಿಲ್ಲವೇ? ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ಭಿನಾಭಿಪ್ರಾಯಗಳು ಸಹಜ. ರಾಜ್ಯದಲ್ಲಿ ಬಿಜೆಪಿ ಸರಕಾರ ಸಬಲವಾಗಿದೆ. ಐದು ವರ್ಷಗಳನ್ನು ಕಂಡಿತ ಪೂರೈಸುತ್ತದೆ ಎಂದರು.
ಇದಕ್ಕೂ ಮುನ್ನ ಈಶ್ವರಪ್ಪ ನವದೆಹಲಿಯಲ್ಲಿ ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಸ್ತ ಲಾಘವ ಮಾಡಿದ್ದರು. ಆದರೆ ಯಾವುದೇ ಮಾತುಕತೆ ಆಡಲಿಲ್ಲ. ಪತ್ರಿಕಾಗೋಷ್ಠಿ ಕರೆಯುವ ಬಗ್ಗೆ ಮಾತ್ರ ಈಶ್ವರಪ್ಪ ಸ್ಪಷ್ಟ ಸೂಚನೆ ಕೊಟ್ಟಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಕಲ್ಲುಬಂಡೆಯಷ್ಟು ಗಟ್ಟಿಯಾಗಿದೆ. ನಮ್ಮಲ್ಲಿನ ಸಮಸ್ಯೆಗಳನ್ನು ಕುಳಿತು, ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದರು. ಒಟ್ಟಿನಲ್ಲಿ ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ, ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾಗಿದೆ ಅಷ್ಟೆ.
(ದಟ್ಸ್ ಕನ್ನಡ ವಾರ್ತೆ)