ಬಿಎಸ್ ವೈಸಾಧನೆ ಆಪರೇಷನ್ ಕಮಲ: ಉಗ್ರಪ್ಪ
ಬೆಂಗಳೂರು, ಮೇ.30: ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರಕಾರದ ಸಾಧನೆ ಶೂನ್ಯವಾಗಿದ್ದು ಅಭಿವೃದ್ಧಿ ಪಥದ ದಿಕ್ಕು ತಪ್ಪಿಸಲಾಗಿದೆ. ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ವಿ ಎಸ್ ಉಗ್ರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರ ವೃಥಾ ಕಾಲಹರಣ ಮಾಡಿದೆ. ಸಚಿವರ ಆಸ್ತಿ ವೃದ್ಧಿಯಾಗಿರಬಹುದು. ಆದರೆ ಜನ ಸಾಮಾನ್ಯರ ಬದುಕು ಹಸನಾಗಿಲ್ಲ. ಜನಾದೇಶ ಧಿಕ್ಕರಿಸಿ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಸರಕಾರವನ್ನು ಬಲಪಡಿಸಿಕೊಳ್ಳಲು 'ಆಪರೇಷನ್ ಕಮಲ' ನಡೆಸಿದ್ದೇ ಯಡಿಯೂರಪ್ಪ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಸರಕಾರ ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ದಂಧೆ ನಡೆಸಿದೆ. ಆಂಧ್ರದ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕುಳಿತಿದ್ದು ಮುಖ್ಯಮಂತ್ರಿಗಳ ಸಾಧನೆ.
ಚರ್ಚ್ ಮೇಲಿನ ದಾಳಿ ಈ ಸರಕಾರದ ದೊಡ್ಡ ವೈಫಲ್ಯ. ಮೇ 31 ರಂದು ಸಾಧನಾ ಸಮಾವೇಶ ಮಾಡಲು ಬೇರೆ ಹೊರಟಿದ್ದಾರೆ, ಇದು ಯಾವ ಪುರುಷಾರ್ಥಕ್ಕಾಗಿ? ಒಂದು ವರ್ಷದ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಇವರಿಂದ ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಬಡವರಿಗೆ ಎರಡು ರೂಪಾಯಿಗೆ ಅಕ್ಕಿ ನೀಡುವ ಇವರ ಮಾತು ಏನಾಯಿತು? ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಕೂಡ ನೀಡಲಿಲ್ಲ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications