ಸಂಘರ್ಷ, ಸವಾಲುಗಳ ನಡುವೆ ಸರಕಾರಕ್ಕೆ ವರ್ಷ

BSY smile as BJP completes one year
ಬೆಂಗಳೂರು, ಮೇ. 30 : ಕೊನೆಗೂ ಹಾಗೋ ಹೀಗೋ ಮಾಡಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಕಿರೀಟವಿಟ್ಟುಕೊಂಡಿರುವ ಯಡಿಯೂರಪ್ಪ ಅವರಿಗೆ ಈ ಒಂದು ವರ್ಷದ ಅವಧಿಯ ಆಡಳಿತ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ರೈತ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ, ಅಭಿವೃದ್ಧಿ ಮಂತ್ರಿ ಪಠಿಸುತ್ತಾ ಒಂದು ವರ್ಷ ಮುಗಿಸಿದ್ದಾರೆ. 365 ದಿನಗಳ ಯಶಸ್ವಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರು ನ್ಯಾಷನಲ್ ಮೈದಾನದಲ್ಲಿ ವಿಕಾಸ್ ಸಂಕಲ್ಪ ಎಂಬ ಹೆಸರಿನ ಬೃಹತ್ ಸಮಾವೇಶ ಏರ್ಪಡಿಸಿ ಸಂಭ್ರಮಿಸತೊಡಗಿದೆ. ಈ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಘೋಷಿಸುವುದಾಗಿ ಬಿಜೆಪಿ ಹೇಳಿಕೊಂಡಿದೆ.

ಅಧಿಕಾರದ ಚುಕ್ಕಾಣಿ ಹಿಡಿದ ಆರಂಭದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೆ ಮಹತ್ಸಾಧನೆ ಎಂದೇ ತಿಳಿದುಕೊಂಡಿದ್ದ ಬಿಜೆಪಿ ನಾಯಕರು ನಂತರ ದಿನಗಳಲ್ಲಿ ವಾಸ್ತವ ಅರಿದುಕೊಂಡರು. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಬಿಜೆಪಿ ಖಾತೆ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ನಿದ್ದೆಗೆಡಿಸಿತು. ಆ ಪಕ್ಷಗಳ ನಾಯಕರು ಸರಕಾರದ ಪ್ರತಿ ಹೆಜ್ಜೆಯಲ್ಲೂ ತಪ್ಪು ಹುಡುಕಲು ಆರಂಭಿಸಿದರು. ಆಗ ಸಿಕ್ಕಿದ್ದು, ಹಾವೇರಿ ರಸಗೊಬ್ಬರ ಗಲಭೆ, ಮಂಗಳೂರು ಚರ್ಚ್ ದಾಳಿ, ಪಬ್ ದಾಳಿಗಳು ಹಾಗೂ ಕೋಮುಗಲಭೆಗಳು ಸರಕಾರದ ಬುಡವನ್ನು ಅಲುಗಾಡಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದೂ ಉಂಟು.

ಬೆಂಗಳೂರು ಸರಣಿ ಬಾಂಬ್ ಸ್ಫೋಟ, ವಿದ್ಯುತ್ ಅಭಾವ, ಆಪರೇಷನ್ ಕಮಲದ ಕಾರ್ಯಾಚರಣೆ, ಸಂಪುಟದಿಂದ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರನ್ನು ಕೈಬಿಟ್ಟಿದ್ದು, ಸರಕಾರಿ ನೌಕರರ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಕೋಟ್ಯಂತರ ರುಪಾಯಿ ಕೈಬದಲಾವಣೆಯ ಆರೋಪ, ಬಳ್ಳಾರಿ ಗಣಿ ಗದ್ದಲಗಳು ಸರಕಾರವನ್ನು ಭಾರಿ ಸಂಕಷ್ಟಕ್ಕೆ ಸಿಲುಕಿಸಿದ್ದವು. ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತ ಯಡಿಯೂರಪ್ಪ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದಾರೆ.

ಇನ್ನು ಸರಕಾರದ ಸಾಧನೆಗಳ ಬಗ್ಗೆ ಅವಲೋಕಿಸುವುದಾದರೆ, ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಬಹುತೇಕ ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಗೆ ತಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರು ಸ್ಲಂ ನಿವಾಸಿಗಳಿಗೆ 9 ಸಾವಿರಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲು ಮುಂದಾಗಿರುವುದು ಸರಕಾರದ ದೊಡ್ಡ ಕೆಲಸ ಎನ್ನಬಹುದು. ಇದಕ್ಕೆ ಮುಂಬರುವ ಬಿಬಿಎಂಪಿ ಚುನಾವಣೆಗಳೂ ಕಾರಣ ಎನ್ನುವ ಆರೋಪವೂ ಇದೆ. ಏನೇ ಆದರೂ ಈ ಮೂಲಕವಾದರೂ ಸ್ಲಂ ಜನರಿಗೆ ಸೂರೊಂದು ಸಿಕ್ಕಂತಾಗುತ್ತದೆ.

ರೈತರಿಗೆ, ನೇಕಾರರಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ. ಸಾವಯುವ ಕೃಷಿಗೆ ಉತ್ತೇಜನಕ್ಕೆ ರೈತರಿಗೆ ಸಹಾಯಧನ. ಸರಕಾರಿ ನೌಕರರ ನಿವೃತ್ತಿ ವಯಸ್ಸು 60ಕ್ಕೆ ಏರಿಸಿದ್ದು. ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ. ಹಾಲು ಉತ್ಪಾದಕರಿಗೆ ಲೀಟರ್ ಗೆ ಎರಡು ರುಪಾಯಿ ಸಹಾಯಧನ. ಶೇ. 75 ರಷ್ಟು ವಿಕಲಚೇತನರಿಗೆ ಮಾಸಿಕ 1000 ರುಪಾಯಿ ಸಹಾಯಧನ. ಭಾಗ್ಯಲಕ್ಷ್ಮಿ ಯೋಜನೆ 1 ಲಕ್ಷಕ್ಕೆ ಏರಿಸಿದ್ದು. ವಯೋವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆ. ಅರೆಕಾಲಿಕ ಉಪನ್ಯಾಸಕರ ಸಂಭಾವನೆ ಹೆಚ್ಚಳ. ಗ್ರಾಮೀಣ ಜನರ ಅನುಕೂಲಕ್ಕಾಗಿ ಆರೋಗ್ಯ ರಕ್ಷ ಕವಚ ಯೋಜನೆ. ಉಚಿತ ಬೈಸಿಕಲ್ ವಿತರಣೆ ಯೋಜನೆಗಳು ಸರಕಾರದ ಸಾಧನೆಗಳಾಗಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+