ಆಗಸ್ಟ್ 15 ರೊಳಗೆ ಕಾಮಗಾರಿಗಳು ಪೂರ್ಣ : ಶೋಭಾ
ಮೈಸೂರು, ಮೇ. 27 : ಮೈಸೂರು ನಗರವನ್ನು ಸುಂದರ ನಗರವನ್ನಾಗಿ ರೂಪಿಸುವ ದಿಸೆಯಲ್ಲಿ ನಗರದಲ್ಲಿ ರಸ್ತೆ , ಸೇತುವೆ, ಅಂಡರ್ ಪಾಸ್, ಉದ್ಯಾನವನಗಳ ಅಭಿವೃದ್ಧಿ ಹೀಗೆ ಸರ್ವಾಂಗೀಣ ಪ್ರಗತಿಗೆ ಒಟ್ಟು 135 ಕಾಮಗಾರಿಗಳನ್ನು ಒಟ್ಟು 100 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕೈಗೊಂಡಿದ್ದು ಎಲ್ಲಾ ಕಾಮಗಾರಿಗಳನ್ನು ಮುಂದಿನ ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ.
ಇದೇ ಮುಂಬರುವ ಪಂಚಲಿಂಗದರ್ಶನ ವೇಳೆಗೆ ತಲಕಾಡು ತಲುಪುವ ನಾಲ್ಕು ಕಡೆ ರಸ್ತೆಗಳ ಅಭಿವೃದ್ಧಿಗಾಗಿ 125 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.
ಅವರು ಇಂದು ಮೈಸೂರು ನಗರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೊಡಮಾಡಿರುವ ರೂ.100 ಕೋಟಿ ವಿಶೇಷ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಮೈಸೂರು ನಗರದಲ್ಲಿ ಸುಗಮ ರಸ್ತೆ ಸಂಚಾರಕ್ಕಾಗಿ 5 ಕಡೆಗಳಲ್ಲಿ ಸಬ್ವೇ ನಿರ್ಮಾಣ ಕಾರ್ಯಗಳನ್ನು5 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 3 ಸಬ್ವೇಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.
ಮೈಸೂರಿನ ಮೃಗಾಲಯ ಇಡೀ ಪ್ರಪಂಚದಲ್ಲೇ ಒಂದು ಮಾದರಿ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ ರೂ.3.25 ಕೋಟಿ ವೆಚ್ಚದಲ್ಲಿ ಒಂದು ಅಧ್ಬುತವಾದ ಮತ್ಸ್ಯಾಗಾರ (ಅಕ್ವೇರಿಯಮ್) ಸ್ಥಾಪಿಸಲು ಯೋಜಿಸಲಾಗಿದೆ ಎಂದ ಸಚಿವರು ಮೈಸೂರು ನಗರದಲ್ಲಿ 500ಕ್ಕೂ ಹೆಚ್ಚಿರುವ ಉದ್ಯಾನವನಗಳ ಅಭಿವೃದ್ಧಿಗೆ ಸರ್ಕಾರ ನೀಲಿ ನಕಾಶೆ ತಯಾರಿಸಿದ್ದು , ಇದಕ್ಕಾಗಿ ರಾಜ್ಯ ಸರ್ಕಾರ 7 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications