ಕೆಪಿಸಿಸಿ ಪುನಾರಚನೆಗೆ ದೇಶಪಾಂಡೆ ಒಲವು
ಬೆಂಗಳೂರು, ಮೇ.25: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ)ಯನ್ನು ಪುನಾರಚಿಸುವ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸೋಮವಾರ ಅಭಿಪ್ರಾಯ ಪಟ್ಟರು.
ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ದೇಶಪಾಂಡೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಆರು ಲೋಕಸಭಾ ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಆದರೆ ಮತದಾನದ ಪ್ರಮಾಣ ಶೇ.3ರಷ್ಟು ಅಧಿಕವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರ ಯಂತ್ರವನ್ನು ದುರುಪಯೋಗಪಡಿಸಿಕೊಂಡಿತು. ಹಣ ಮತ್ತು ಮದ್ಯದ ಮೂಲಕ ರಾಜ್ಯದ 19 ಲೋಕಸಭೆ ಸ್ಥಾನಗಳಲ್ಲಿ ಗೆದ್ದಿದೆ. ಆದರೆ ಕಾಂಗ್ರೆಸ್ ಗೆ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಸಂತೋಷದ ವಿಷಯ ಎಂದರು.
ಹಲವು ವರ್ಷಗಳಿಂದ ಪಕ್ಷದ ಪುನಾರಚನೆ ಆಗಿಲ್ಲ. ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಪಕ್ಷವನ್ನು ಬಲಗೊಳಿಸಲು ಸಾಧ್ಯ ಎಂದು ಪಕ್ಷದ ಕಚೇರಿಅಯಲ್ಲಿ ಅವರು ತಿಳಿಸಿದರು. ಬ್ಲಾಕ್ ಮಟ್ಟದಿಂದ ಪಕ್ಷವನ್ನು ಪುನಾರಚನೆ ಮಾಡಲಾಗುತ್ತದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟು ಪ್ರದರ್ಶಿಸಲಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)