ಜೂನ್ 1ರಿಂದ ಲೋಕಸಭೆ ಅಧಿವೇಶನ ಆರಂಭ
ನವದೆಹಲಿ, ಮೇ 23 : ಪ್ರಧಾನಿಯಾಗಿ ಸತತ ಎರಡನೇ ಬಾರಿಗೆ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ಕಾರ್ಯಾರಂಭಿಸಿದ್ದಾರೆ.
ಶನಿವಾರ, ಮೇ 23ರಂದು ಬೆಳಿಗ್ಗೆ ಮನಮೋಹನ ಸಿಂಗ್ ಅವರು ನೂತನವಾಗಿ ಆಯ್ಕೆಯಾಗಿರುವ ಸಂಪುಟ ದರ್ಜೆಯ ಸಚಿವರ ಸಭೆ ಕರೆದಿದ್ದರು. ಈ ಭೇಟಿಯನ್ನು ಅನೌಪಚಾರಿಕ ಭೇಟಿ ಎನ್ನಲಾಗಿತ್ತಾದರೂ, ಪ್ರಧಾನಿ ಮನೆಯಲ್ಲಿ ನಡೆದ ಸಭೆಯಲ್ಲಿ ಜಂಟಿ ಅಧಿವೇಶನ ಕುರಿತಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ನಂತರ ಪಿ. ಚಿದಂಬರಂ ಅವರು ಸಭೆಯ ನಿರ್ಣಯಗಳನ್ನು ತಿಳಿಸಿದರು. ಜೂನ್ 1ರಿಂದ 9ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. 1 ಮತ್ತು 2ರಂದು ನೂತನ ಸದಸ್ಯರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಿದ್ದಾರೆ. 3ರಂದು ಲೋಕಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಮತ್ತು ಜೂನ್ 4ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನ ಜೂನ್ 9ರಂದು ಕೊನೆಗೊಳ್ಳಲಿದೆ.
ಇದಿಷ್ಟೇ ಅಲ್ಲದೆ, ಜೂನ್ 31ರೊಳಗಾಗಿ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸಲು ಸಂಪುಟ ಸಭೆ ನಿರ್ಧಸಿರಿದೆ.
ಸಭೆ ನಡೆಸುವ ಮೊದಲು ಸಿಂಗ್ ಅವರು ಮಹಾತ್ಮಾ ಗಾಂಧಿ ಸ್ಮಾರಕ ಸೇರಿದಂತೆ ಪ್ರಮುಖ ವ್ಯಕ್ತಿಗಳ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಮೇ 22ರಂದು ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ಮತ್ತು ಇತರ 19 ಕ್ಯಾಬಿನೆಟ್ ದರ್ಜೆಯ ಸಚಿವರು ಪ್ರಮಾಣ ಸ್ವೀಕರಿಸಿದರು. ಬರುವ ಮಂಗಳವಾರ ಮಂತ್ರಿಮಂಡಳವನ್ನು ವಿಸ್ತರಿಸುವ ಸಾಧ್ಯತೆಯಿದೆ.
ಎರಡನೇ ಹಂತದ ವಿಸ್ತರಣೆಯಲ್ಲಿ ಕಾಂಗ್ರೆಸ್ ನ ಯುವ ಜನಪ್ರತಿನಿಧಿಗಳು ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯರಿಗೆ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಸಚಿವರಿಗೆ ಸನ್ಮಾನ : ಕರ್ನಾಟಕದಿಂದ ಕೇಂದ್ರ ಸಂಪುಟಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ವೀರಪ್ಪ ಮೊಯ್ಲಿ ಹಾಗು ಗುಲಾಂ ನಭಿ ಆಝಾದ್ ಅವರನ್ನು ಇಲ್ಲಿನ ಕರ್ನಾಟಕ ಭವನದಲ್ಲಿ ಸನ್ಮಾನಿಸಲಾಯಿತು.
(ಏಜೆನ್ಸೀಸ್)












Click it and Unblock the Notifications