ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್

By Staff
|
Google Oneindia Kannada News

Manmohan Singh sworns-in as Prime Minister of India
ನವದೆಹಲಿ, ಮೇ. 22 : ಜವಾಹರಲಾಲ್ ನೆಹರು ನಂತರ ಸತತ ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.

ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆದ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕಾರ ಗೌಪ್ಯತೆ ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇಶದ ಘಟಾನುಘಟಿ ಗಣ್ಯರ ಸಮ್ಮಖದಲ್ಲಿ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಸೇರಿ ಸಚಿವ ಸಂಪುಟದ 19 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಣಬ್ ಮುಖರ್ಜಿ, ಪಿ ಚಿದಂಬರಂ, ಮಮತಾ ಬ್ಯಾನರ್ಜಿ, ಎಸ್ ಎಂ ಕೃಷ್ಣ, ಶರದ್ ಪವಾರ್, ವೀರಪ್ಪ ಮೊಯ್ಲಿ, ಕಮಲನಾಥ್, ಕಪಿಲ್ ಸಿಬಲ್, ಸುಶೀಲ್ ಕುಮಾರ್ ಶಿಂಧೆ, ವಯಲಾರ್ ರವಿ, ಸಿಪಿ ಜೋಶಿ, ಜೈಪಾಲ್ ರೆಡ್ಡಿ, ಮೀರಾ ನಾಯರ್, ಗುಲಾಮ್ ನಬಿ ಅಜಾದ್, ಆನಂದ ಶರ್ಮಾ, ಅಂಬಿಕಾ ಸೋನಿ, ಮುರಳಿ ದೇವೋರಾ, ಮತ್ತು ಬಿ ಕೆ ಹಂಡಿಕ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿಯಲ್ಲಿದ್ದಾರೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಐಕೆ ಗುಜ್ರಾಲ್, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಶಿವರಾಜ್ ಪಾಟೀಲ್, ಕರಣ್ ಸಿಂಗ್, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಶೀಲಾ ದಿಕ್ಷೀತ್, ರೆಹಮಾನ್ ಖಾನ್ ಪಾಲ್ಗೊಂಡಿದ್ದರು. ಮನಮೋಹನ್ ಸಿಂಗ್ ಅವರ ಕುಟಂಬ ವರ್ಗ ಕೊಲ್ಕತ್ತಾ, ಅಮೃತಸರ ಮತ್ತು ಗೌಹಾತಿಯಿಂದ ಆಗಮಿಸಿ ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಮನಮೋಹನ್ ಸಿಂಗ್ ಸಾಗಿ ಬಂದ ದಾರಿ
76ರ ಹರೆಯ ಮನಮೋಹನ್ ಸಿಂಗ್ ಕೊನೆಗೂ ದೇಶದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಂಗ್ ಹೇಳಿಕೊಂಡಂತೆ ಆಕಸ್ಮಿಕವಾಗಿ ರಾಜಕಾರಣಿಯಾದವರು. ದೇಶ ಮುನ್ನಡೆಸುವ ಅವಕಾಶ ದೊರೆತದ್ದು ಬಯಸದೆ ಬಂದ ಭಾಗ್ಯ. ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಅವರಿಂದ ದುರ್ಬಲ ಪ್ರಧಾನಿ ಎಂಬ ವೈಯಕ್ತಿಕ ನಿಂದನೆ, ಬಿಜೆಪಿ ಸ್ಟಾರ್ ಕ್ಯಾಂಪೇನರ್ ನರೇಂದ್ರ ಮೋದಿ ಅವರ ನಿಂದನೆಯ ವಾಗ್ಬಾಣಗಳು ಸಿಂಗ್ ಅವರನ್ನು ಕೆಲ ದಿನಗಳ ಮಟ್ಟಿಗೆ ನಿದ್ದೆಗೆಡಿಸಿತ್ತು ಎನ್ನುವುದು ಸುಳ್ಳಲ್ಲ.

ಸಿಂಗ್ ದೇಶದ ಕಂಡ ಪ್ರಕಾಂಡ ಅರ್ಥಶಾಸ್ತ್ರಜ್ಞ. ಕೇಂಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ. ಭಾರತದ ಆರ್ಥಿಕ ಸಲಹೆಗಾರರಾಗಿ ನೇಮಕ. ಪಿವಿ ನರಸಿಂಹರಾವ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಣೆ. ಕಾಂಗ್ರೆಸ್ ಕಾರ್ಯಾಕಾರಿ ಸಮಿತಿಯಲ್ಲಿ ಸದಸ್ಯತ್ವ ಸ್ಥಾನ. 1998ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ. 2004ರಲ್ಲಿ ಯುಪಿಎ ಮೈತ್ರಿಕೂಟದ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿ ನೇಮಕ. ಕಳೆದ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ. ರೈತರ ಸಾಲಮನ್ನಾ, ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದ. ಉದ್ಯೋಗ ಖಾತ್ರಿ ಯೋಜನೆಗಳು ಸಿಂಗ್ ನೇತೃತ್ವದ ಸರಕಾರದ ಸಾಧನೆಗಳಾಗಿವೆ. ಇದೀಗ ಮತ್ತೆ ಇನ್ನೈದು ವರ್ಷಗಳ ಕಾಲ ದೇಶದ ಮುನ್ನೆಡೆಸುವ ಅವಕಾಶ ಮನಮೋಹನ್ ಸಿಂಗ್ ಅವರಿಗೆ ದೊರೆತಿದ್ದು, ಉತ್ತಮ ಆಡಳಿತ ನೀಡುವೆ ಎಂಬ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X