ಸಚಿವರ ಪಟ್ಟಿಯಲ್ಲಿ ಕೃಷ್ಣ, ಮೊಯಿಲಿಗೆ ಸ್ಥಾನ
ನವದೆಹಲಿ, ಮೇ. 22 : ಇಂದು ನಡೆಯಲಿರುವ ನೂತನ ಸರಕಾರದ ಪ್ರಮಾಣ ವಚನ ಸಮಾರಂಭದಲ್ಲಿ 19 ಸಂಸದರು ಮನಮೋಹನ್ ಸಿಂಗ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಳೆಯ ತಲೆಗಳಾದ ಹಾಲಿ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್, ಮತ್ತು ಜಾರ್ಕಂಡ್ ಮುಕ್ತಿ ಮೋರ್ಚಾದ ಮುಖ್ಯಸ್ಥ ಶಿಬು ಸೊರೇನ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಅದರೆ, ಅನೇಕ ಹೊಸಮುಖಗಳಿಗೆ ಮನಮೋಹನ್ ಸಿಂಗ್ ಅವರು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕರ್ನಾಟಕಕ್ಕೆ ಮೊದಲ ಬಾರಿಗೆ ಎರಡು ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುವುದು ಖಾತ್ರಿಯಾಗಿದೆ.
ಇಬ್ಬರು ಅಂಗಪಕ್ಷಗಳ ಮುಖಂಡರು ಸೇರಿದಂತೆ ಒಟ್ಟು 19 ಮಂದಿ ಇಂದು ಮನಮೋಹನ್ ಸಿಂಗ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಹೆಸರು ಇಂತಿದೆ. ಪ್ರಣಬ್ ಮುಖರ್ಜಿ (ಹಣಕಾಸು), ಪಿ ಚಿದಂಬರಂ (ಗೃಹ), ಮಮತಾ ಬ್ಯಾನರ್ಜಿ (ರೈಲ್ವೆ), ಎಸ್ ಎಂ ಕೃಷ್ಣ, ಶರದ್ ಪವಾರ್ (ಕೃಷಿ), ವೀರಪ್ಪ ಮೊಯ್ಲಿ, ಕಮಲನಾಥ್, ಕಪಿಲ್ ಸಿಬಲ್, ಸುಶೀಲ್ ಕುಮಾರ್ ಶಿಂಧೆ, ವಯಲಾರ್ ರವಿ, ಸಿಪಿ ಜೋಶಿ, ಜೈಪಾಲ್ ರೆಡ್ಡಿ, ಮೀರಾ ನಾಯರ್, ಆನಂದ ಶರ್ಮಾ, ಅಂಬಿಕಾ ಸೋನಿ, ಮುರಳಿ ದೇವೋರಾ, ಮತ್ತು ಬಿ ಕೆ ಹಂದಿಕಿ ಕ್ಯಾಬಿನೆಟ್ ಸಚಿವರಾಗುವ ನಿರೀಕ್ಷೆಯಿದೆ. ಮುಂದಿನ ಮಂಗಳವಾರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದ್ದು, ಡಿಎಂಕೆ ಸಂಸದರು ಹಾಗೂ ಯುವಸಂಸದರಾದ ಜಿತಿನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲೆಟ್ ಅವರುಗಳು ಸಂಪುಟ ಸೇರುವ ಸಾಧ್ಯತೆಗಳಿವೆ.
ಅಂಗಪಕ್ಷಗಳ ಪೈಕಿ ಎನ್ ಸಿಪಿಯ ಶರದ್ ಪವಾರ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷ ನಾಯಕಿ ಮಮತಾ ಬ್ಯಾನರ್ಜಿ ಅವರು ಮಾತ್ರ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಎಂಕೆ ಹೆಚ್ಚು ಸ್ಥಾನಗಳಿಗೆ ಪಟ್ಟು ಹಿಡಿದಿದ್ದು, ಇಂದಿನ ಕಾರ್ಯಕ್ರಮದಲ್ಲಿ ಆ ಪಕ್ಷದ ಯಾವ ಸಂಸದರೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಆದರೆ, ಮೊದಲು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಡಿಎಂಕೆ ಹೇಳಿತ್ತು. ನಂತರ ಆ ಪಕ್ಷದ ಮುಖಂಡ ಹಾಗೂ ಮಾಜಿ ಕೇಂದ್ರ ಮಂತ್ರಿ ಟಿ ಆರ್ ಬಾಲು ಮಾತನಾಡಿ, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
(ಏಜನ್ಸೀಸ್)