ರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್
ಇಂದು ಬೆಳಗ್ಗೆ 10.30ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ಕರುಣಾನಿಧಿ ಅವರು 8 ಡಿಎಂಕೆ ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದಿದ್ದಾರೆ. ಅತ್ತ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನಾನೇನು ಕಮ್ಮಿಯಿಲ್ಲ ಎನ್ನುವಂತೆ ಟಿಎಂಸಿಯ 9 ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರು ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದರಿಂದ ಸರಕಾರ ರಚನೆಗೆ ವಿಳಂಬವಾಗಿದೆ ಎನ್ನಲಾಗಿದೆ. ಈ ಇಬ್ಬರು ನಾಯಕರ ಸಮಸ್ಯೆಯನ್ನು ಬಗೆಹರಿಸಿ ನಂತರ ಮನಮೋಹನ್ ಸಿಂಗ್ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 18 ಸ್ಥಾನಗಳನ್ನು ಡಿಎಂಕೆ ಪಡೆದುಕೊಂಡಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 19 ಜನ ಆಯ್ಕೆಯಾಗಿದ್ದಾರೆ. ಯುಪಿಎ ಒಕ್ಕೂಟದಲ್ಲಿ ಈ ಎರಡು ಪಕ್ಷಗಳ ಅತ್ಯಧಿಕ ಸಂಖ್ಯೆಯ ಸಂಸದರಿದ್ದು, ಸಹಜವಾಗಿಯೇ ಹೆಚ್ಚು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
(ಏಜನ್ಸೀಸ್)