ಮರುಆಯ್ಕೆಯಾಗುವ ಮೊದಲೇ ಗುಳೆಕಿತ್ತ ಪ್ರಧಾನಿ
ಮುಂದಿನ ಪ್ರಧಾನಿ ತಾವೇ ಆಗುವ ಕುರಿತು ಸಿಂಗ್ ಅವರಿಗೇ ಅನುಮಾನಗಳೆದ್ದಿರುವ ಕಾರಣ ಮನೆ ಬದಲಾಯಿಸಲು ಅವರು ಮನಸು ಮಾಡಿರುವುದಾಗಿ ಕೇಳಿಬರುತ್ತಿದೆ. ಒಂದು ವೇಳೆ ಯುಪಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವ ಮೊದಲು ಎಡರಂಗ ಪ್ರಧಾನಿ ಅಭ್ಯರ್ಥಿ ಬದಲಾವಣೆ ಬಯಸುವ ಊಹಾಪೋಹ ಎದ್ದಿರುವುದರಿಂದ ಅವರು ಈ ನಿರ್ಣಯಕ್ಕೆ ಬಂದಿದ್ದಾರೆನ್ನಲಾಗಿದೆ. ಅಮೆರಿಕದೊಂದಿಗೆ ಅಣುಬಂಧಕ್ಕೆ ಸಿಂಗ್ ಪಟ್ಟುಹಿಡಿದಿದ್ದರಿಂದ ಎಡರಂಗ ಮುನಿಸಿಕೊಂಡು ಯುಪಿಎ ಮೈತ್ರಿಯನ್ನು ತೊರೆದಿತ್ತು.
ಪ್ರಧಾನಿಯ ವಿಶೇಷ ಭದ್ರತಾ ತಂಡ ಈಗಾಗಲೆ ದೆಹಲಿಯಲ್ಲಿ ನಾಲ್ಕು ಬಂಗಲೆಗಳನ್ನು ನೋಡಿದೆ. ಹುದ್ದೆಯಲ್ಲಿರುವಾಗಲೇ ಪ್ರಧಾನಿಯೊಬ್ಬರು ಅಧಿಕೃತ ನಿವಾಸ ತ್ಯಜಿಸಲು ಇಚ್ಛಿಸಿದ್ದು ಇದೇ ಮೊದಲು.
ಈ ಬೆಳವಣಿಗೆಯಿಂದ ಗಲಿಬಿಲಿಗೊಳಗಾಗಿರುವ ಕಾಂಗ್ರೆಸ್, ಇದಕ್ಕೆ ಬೇರೇನೂ ಅರ್ಥ ಕಲ್ಪಿಸಬಾರದೆಂದು ತೇಪೆ ಹಚ್ಚಲು ಮುಂದಾಗಿದೆ. ಕಾಂಗ್ರೆಸ್ ಸೋಲುವ ಭೀತಿ ಎದುರಿಸಿದ್ದರಿಂದ ಪ್ರಧಾನಿ ಹೀಗೆ ಮಾಡಿದ್ದಾರೆಂದು ಭಾವಿಸಬಾರದು. ಮರು ಆಯ್ಕೆಯಾಗುವವರೆಗೆ ಕ್ಷಣಕಾಲವೂ ಅಧಿಕೃತ ನಿವಾಸದಲ್ಲಿ ಇರಲು ಅವರು ಬಯಸದ್ದರಿಂದ ಹೀಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿಕೆ ನೀಡಿದ್ದಾರೆ.
ಹೊಂದಾಣಿಕೆ, ಮೈತ್ರಿಕೂಟ, ಒಳಹೊರ ಲೆಕ್ಕಾಚಾರ, ಸಾಧಕ ಬಾಧಕಗಳ ಬಗ್ಗೆ ಮನಮೋಹನ ಸಿಂಗ್ ಅವರು ತಲೆಕೆಡಿಸಿಕೊಂಡಿಲ್ಲ. ಬಂದ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಮುಂದಿನ ಪ್ರಧಾನಿಗೆ ಜಾಗ ಖಾಲಿ ಮಾಡಿಕೊಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಹೆಸರಿಸಿ ಸಿಂಗ್ ಅವರೇ ಕೆಲ ದಿನಗಳ ಹಿಂದೆ ಗೊಂದಲ ಸೃಷ್ಟಿಸಿದ್ದರು. ಎಡಪಕ್ಷಗಳು ಕೂಡ ಅವರೇ ಪ್ರಧಾನಿಯಾಗುವ ಕುರಿತು ಒಲವು ತೋರಿಸುತ್ತಿಲ್ಲ.
(ಏಜೆನ್ಸೀಸ್)