ಕೋಲಾರ ಜಿ.ಪಂ. ಅಧ್ಯಕ್ಷರಾಗಿ ಎಂ.ಶ್ರೀನಿವಾಸನ್
ಕೋಲಾರ, ಮೇ. 14 : ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಕ್ಷೇತ್ರದ ಜೆಡಿಎಸ್ ನ ಎಂ.ಶ್ರೀನಿವಾಸನ್ ಹಾಗೂ ಉಪಾಧ್ಯಕ್ಷರಾಗಿ ಬೇತಮಂಗಲ ಕ್ಷೇತ್ರದ (ಬಂಡಾಯ ಕಾಂಗ್ರೆಸ್) ನವೀದಾಖಾನಂ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ಮೇ.13 ರ ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಚುನಾವಣಾ ಸಭೆಯಲ್ಲಿ ಚುನಾವಣಾಧಿಕಾರಿಗಳಾಗಿದ್ದ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಾದ ಜಿ.ಎಂ.ಧನಂಜಯ್ಯ ರವರು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಅಧ್ಯಕ್ಷರ ಸ್ಥಾನಕ್ಕೆ ದೊಡ್ಡೂರು ಕ್ಷೇತ್ರದ ರಾಮಚಂದ್ರ, ಲಕ್ಕೂರು ಕ್ಷೇತ್ರದ ಎಂ.ನಾರಾಯಣಸ್ವಾಮಿ ಹಾಗೂ ಗೌನಪಲ್ಲಿಯ ಎಂ.ಶ್ರೀನಿವಾಸನ್ ನಾಮನಿರ್ದೇಶನ ಸಲ್ಲಿಸಿದ್ದು 3 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿ ಸಿಂಧುವಾಗಿದ್ದ ಕಾರಣ ಅಂಗೀಕರಿಸಿದರು.
ನಂತರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಹತ್ತು ನಿಮಿಷಗಳ ಅವಧಿಯನ್ನು ನೀಡಿದಾಗ ರಾಮಚಂದ್ರ ತಮ್ಮ ನಾಮಪತ್ರವನ್ನು ಹಿಂಪಡೆದರು.ಕಣದಲ್ಲಿ ಎಂ.ನಾರಾಯಣಸ್ವಾಮಿ, ಹಾಗೂ ಎಂ.ಶ್ರೀನಿವಾಸನ್ ಉಳಿದರು. ಎಂ.ನಾರಾಯಣಸ್ವಾಮಿ ಪರವಾಗಿ ಸದಸ್ಯರುಗಳಾದ ವಿನೋದ ಬಿ.ವಿ., ವೆಂಕಟಮುನಿಯಪ್ಪ, ನಾರಾಯಣಸ್ವಾಮಿ, ರಾಮಚಂದ್ರ, ಮುನಿರಾಜು, ವೆಂಕಟರಾಮರೆಡ್ಡಿ, ಕೆ.ಎಸ್.ವಿಜಯಲಕ್ಷ್ಮಿ, ಬಿ.ಎನ್.ಕೋಕಿಲ, ಎ.ಸಿ.ನಾಗರತ್ನಮ್ಮ, ಕೃಷ್ಣಸಿಂಗ್ ಹಾಗೂ ರಾಮೇಗೌಡ ಸೇರಿ 11 ಜನ ಕೈ ಎತ್ತಿದರು.
ಜಿ.ಪಂ. ವ್ಯಾಪ್ತಿಯ ಕಾರ್ಯಕ್ರಮಗಳನ್ನು ನೇರವಾಗಿ ಜನರ ಬಳಿಗೆ ಕೊಂಡ್ಯೊಯ್ದು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ನಡೆಸುವುದಾಗಿ ನೂತನ ಜಿ.ಪಂ. ಅಧ್ಯಕ್ಷ ಎಂ.ಶ್ರೀನಿವಾಸನ್ ತಿಳಿಸಿದರು. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಶ್ರಮಿಸುವುದಾಗಿ ತಿಳಿಸಿದ ಅವರು ಜಿ.ಪಂ. ಅಧ್ಯಕ್ಷ ಸ್ಥಾನವನ್ನು ಅನುಸೂಚಿತ ಜಾತಿಗೆ ಮೀಸಲಿರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರಲ್ಲದೆ, ತಮ್ಮನ್ನು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು. ನೂತನ ಉಪಾಧ್ಯಕ್ಷೆ ನವೀದಾಖಾನಂ ತಮ್ಮ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications