ನಿತೀಶ್ ವಿರುದ್ಧದ ಹೇಳಿಕೆಗೆ ಬೆಲೆತೆತ್ತ ಮೊಯ್ಲಿ
ಪ್ರಸ್ತುತ 15ನೇ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ ಎಂಬುದನ್ನು ಅರಿತಿರುವ ಕಾಂಗ್ರೆಸ್ ಅನ್ಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆ ಪಕ್ಷಗಳಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಕೂಡ ಒಂದು. ಇಂಥ ಸಂದರ್ಭದಲ್ಲಿ ನಿತೀಶ್ ವಿರುದ್ಧ ಮೊಯ್ಲಿ ಹರಿಹಾಯ್ದಿರುವುದು ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು.
ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥರಾಗಿ ಮೊಯ್ಲಿ ಅವರ ಕಾರ್ಯ ತೃಪ್ತಿದಾಯಕವಾಗಿಲ್ಲವಾದ್ದರಿಂದ ಅವರ ತಲೆದಂಡ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರೂ, ನಿತೀಶ್ ವಿರುದ್ಧದ ಹೇಳಿಕೆಯೇ ಅವರು ಪದಚ್ಯುತಿಗೊಳ್ಳಲು ಕಾರಣವೆನ್ನಲಾಗಿದೆ.
ನಿತೀಶ್ ಕುಮಾರ್ ಅವರು ಕೋಮುವಾದಿ ಮತ್ತು ಜಾತ್ಯತೀತ ಮಿಶ್ರಿತ ಹೇಳಿಕೆ ನೀಡುತ್ತಿದ್ದಾರೆ. ಅವರಲ್ಲಿ ಹೀರೋನನ್ನೇನೂ ಕಾಂಗ್ರೆಸ್ ಕಾಣುತ್ತಿಲ್ಲ. ಕೋಮುವಾದಿ ಪಕ್ಷಗಳೊಂದಿಗೆ ಅವರು ಗುರುತಿಸಿಕೊಳ್ಳಬಯಸಿದ್ದರೆ ಅದು ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್ ಅವರನ್ನು ಸಂಪರ್ಕಿಸುವುದಿಲ್ಲ ಎಂದು ಶುಕ್ರವಾರ ಮೊಯ್ಲಿ ಹೇಳಿಕೆ ನೀಡಿ ಕಾಂಗ್ರೆಸ್ ಗೆ ಇರುಸುಮುರುಸು ಮಾಡಿದ್ದರು.
ಇಷ್ಟು ಮಾತ್ರವಲ್ಲದೆ ಗುರುವಾರ ಕೂಡ, ಆರ್ ಜೆಡಿ ಮತ್ತು ಎಲ್ ಜೆಪಿ ಪಕ್ಷಗಳು ಯುಪಿಎ ಮಿತ್ರಪಕ್ಷಗಳ ಒಕ್ಕೂಟದಲ್ಲಿ ಸೇರಿರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮೊಯ್ಲಿ ಹೇಳಿ ಸಂಕಷ್ಟಕ್ಕೀಡಾಗಿದ್ದರು.
ಮೊಯ್ಲಿ ಅವರನ್ನು ಕೆಳಗಿಳಿಸಿದ ನಂತರ ಅವರ ಜಾಗಕ್ಕೆ ಅಶ್ವಿನಿ ಕೇರ್ ಅವರನ್ನು ಮಾಧ್ಯಮ ವಕ್ತಾರರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ.
(ಏಜೆನ್ಸೀಸ್)