ರಾಜಕಾರಣಿಗಳೆಂದರೆ ಜನರಿಗೆ ಅಲರ್ಜಿ : ಮೋದಿ
ನವದೆಹಲಿ, ಮೇ. 7 : ದೇಶದ ಜನತೆ ರಾಜಕಾರಣಿಗಳ ಬಗ್ಗೆ ಬೇಸತ್ತಿದ್ದಾರೆ. ಪೊಳ್ಳು ಭರವಸೆಗಳು, ಆಂತರಿಕ ಕಚ್ಚಾಟಗಳಿಂದ ರೋಸಿ ಹೋಗಿದ್ದಾರೆ. ಜನತೆಯ ಆಕ್ರೋಶದಿಂದ ನಾನೂ ಹೊರತಾಗಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಎಲ್ ಕೆ ಆಡ್ವಾಣಿ ಅವರ ಮುಂದೆ ದೃಢವಾಗಿ ನಿಂತಿದೆ. ಆಡ್ವಾಣಿ ಅವರೇ ಪಕ್ಷದ ಪ್ರಧಾನಿ ಅಭ್ಯರ್ಥಿ. ನಾನು ಪ್ರಧಾನಿ ಹುದ್ದೆಯ ಬಗ್ಗೆ ಕಲ್ಪನೆ ಕೂಡ ಮಾಡಿಲ್ಲ. ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಡ್ವಾಣಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಅದೇ ಸಮಯದಲ್ಲಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಪತ್ರಿಕಾಗೋಷ್ಠಿಯೊ೦ದರಲ್ಲಿ ಪ್ರಧಾನಿಯವರನ್ನು ಆಡ್ವಾಣಿ ಉಮೇದುವಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಲಾಯಿತು. ಆಗ ಈ ವಿವಾದ ಹುಟ್ಟಿಕೊಂಡಿತು ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಗುಜರಾತ್ ಚುನಾವಣೆಯ ಬಳಿಕ ಮೋದಿ ಅವರ ಮೌಲ್ಯ ಹೆಚ್ಚಾಗಿ ಅವರೇ ಸ್ವತಃ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಬಹುದು. ಇದೇ ಕಾರಣಕ್ಕೆ ಬಿಜೆಪಿ ಆಡ್ವಾಣಿ ಅವರ ಹೆಸರನ್ನು ಸೂಚಿಸಿದೆ ಎಂದು ಪ್ರಧಾನಿ ಹೇಳಿದರು. ಇದು ಅವರ ಸ್ವಂತ ಅಭಿಪ್ರಾಯ ಎಂದು ಮೋದಿ ವಿವರಿಸಿದರು.
ಆಡ್ವಾಣಿ ಅವರ ಉಮೇದುವಾರಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ನಾಯಕತ್ವದಡಿ ಎನ್ ಡಿ ಎ ಒಂದುಗೂಡಿ ಸ್ಪರ್ಧಿಸುತ್ತಿದೆ. ಅವರು ನಮ್ಮೆಲ್ಲರ ಸರ್ವಾನುಮತದ ಆಯ್ಕೆ. ಆದರೆ ಯುಪಿಎ ಅಂಗಪಕ್ಷಗಳಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಅಭ್ಯರ್ಥಿಗೆ ವಿರೋಧವಿದೆ. ಸೋನಿಯಾಗಾಂಧಿ ಕುಟುಂಬ ಮಾತ್ರ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳುತ್ತಿದೆ ಎಂದು ಛೇಡಿಸಿದರು.
ಗುಜರಾತನ್ನು ಅಭಿವೃದ್ದಿ ಪಥದಲ್ಲಿ ಮುನ್ನೆಡೆಸಿ ಎರಡು ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭಾರತದ ಭವಿಷ್ಯದ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೋದಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.
(ಏಜನ್ಸೀಸ್)