ನೇಪಾಳದ ಪ್ರಧಾನಿ ಪ್ರಚಂಡ ರಾಜೀನಾಮೆ
ನೇಪಾಳದಲ್ಲಿ ಪ್ರಚಂಡ ವಿರುದ್ದ ತೀವ್ರ ಪ್ರತಿಭಟನೆ ಆರಂಭವಾಗಿದ್ದು, ಪ್ರಧಾನಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನಂತರ ವಾರ್ತಾ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೇಪಾಳ ಅಧ್ಯಕ್ಷ ರಾಮ್ ಬಾರನ್ ಯಾದವ್ ಅವರ ಹಿಟ್ಲರ್ ನೀತಿಯಿಂದಾಗಿ ದೇಶದಲ್ಲಿ ಅಶಾಂತಿ ಉಂಟಾಗಿದೆ ಎಂದು ಪ್ರಚಂಡ ಆರೋಪಿಸಿದರು.
ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿರುವ ಅಧ್ಯಕ್ಷರು ಅಮಾನತುಗೊಂಡಿರುವ ಸೇನಾಪಡೆಯ ಮುಖ್ಯಸ್ಥನ ಪರ ವಹಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಎಸೆಗಿದ್ದಾರೆ. ರುಕ್ಮಾಂಗದ ಕಟವಾಲ್ ಅವರಿಗೆ ಹುದ್ದೆ ತ್ಯಜಿಸಬೇಡಿ ಎಂದು ಅಧ್ಯಕ್ಷ ಯಾದವ್ ಹೇಳಿರುವುದು ಅತ್ಯಂತ ಖಂಡನೀಯ ಕೆಲಸವಾಗಿದೆ ಎಂದು ಪ್ರಚಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಣಯವನ್ನು ದಿಕ್ಕರಿಸಿರುವ ಅಧ್ಯಕ್ಷ ಯಾದವ್ ಸಂಪೂರ್ಣ ಏಕಪಕ್ಷೀಯ ಆಡಳಿತ ನಡೆಸುತ್ತಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಏಕೈಕ ಉದ್ದೇಶದಿಂದ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದರು.
ಸೇನಾ ಮುಖ್ಯಸ್ಥ ರುಕ್ಮಾಂಗದ ಅವರ ಪದಚ್ಯುತಿಗೊಳಿಸಿದ ಕ್ರಮವನ್ನು ಖಂಡಿಸಿ ಆಡಳಿತ ರೂಢ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯಲು ಸಿಪಿಐ(ಯುಎಂಎಲ್) ನಿರ್ಧರಿಸಿತ್ತು. ಪ್ರಚಂಡ ಅವರ ನಿರ್ಧಾರದಿಂದ ಆಡಳಿತರೂಢ ಮಿತ್ರ ಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ನೇಪಾಳದ ಪ್ರತಿ ಪಕ್ಷ ಕಾಂಗ್ರೆಸ್ ಕೂಡಾ ಪ್ರಚಂಡ ಅವರ ನಿಲುವನ್ನು ಟೀಕಿಸಿದ್ದು, ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿತ್ತು.
(ಏಜನ್ಸೀಸ್)