ಫಲಿತಾಂಶದ ನಂತರ ಸಚಿವ ಸಂಪುಟ ಪುನರ್ ರಚನೆ
ಬೆಂಗಳೂರು, ಮೇ. 4 : ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಅಂತಹ ಪ್ರಭಾವ ಬೀರದಿರಬಹುದು. ಆದರೆ, ರಾಜ್ಯ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಲೋಕಸಭೆ ಫಲಿತಾಂಶ ಇದೇ 16 ರಂದು ಹೊರಬೀಳಲಿದೆ. ಇದರ ಬೆನ್ನಲ್ಲೇ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಬಿಜೆಪಿ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಸಂಪುಟದಿಂದ ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ಸಂಭವ ಹೆಚ್ಚಾಗಿದೆ. ಈಗ 115 ಬಿಜೆಪಿ ಶಾಸಕರಿದ್ದು, 6 ಮಂದಿ ಪಕ್ಷೇತರರ ಶಾಸಕರಿದ್ದಾರೆ. ಮೊದಲಿಗಿಂತ ಮುಖ್ಯಮಂತ್ರಿ ಯಡಿಯೂರಪ್ಪ ಗಟ್ಟಿಯಾಗಿದ್ದು, ಸಂಪುಟ ಪುನರ್ ರಚನೆಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ವಿ ಸೋಮಣ್ಣ ಅವರು ನಗರಾಭಿವೃದ್ಧಿ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಯಡಿಯೂರಪ್ಪ ಸಮ್ಮತಿಸಿದ್ದಾರೆ. ಇದರಿಂದ ಸೋಮಣ್ಣ ಮರುಚುನಾವಣೆಯಲ್ಲಿ ಸರಳವಾಗಿ ಗೆಲ್ಲುವ ಯೋಚನೆ ಯಡಿಯೂರಪ್ಪ ಅವರದಾಗಿದೆ.
ಸಂಪುಟದಲ್ಲಿ ಯಾರನ್ನು ಕೈಬಿಡಬೇಕು ಎಂದು ಚರ್ಚೆ ಆರಂಭವಾಗಿದ್ದು, ಒಂದಿಬ್ಬರು ಪಕ್ಷೇತರ ಶಾಸಕರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪಕ್ಷೇತರರಲ್ಲಿ ಗೂಳಿಹಟ್ಟಿ ಶೇಖರ್ ಹಾಗೂ ವೆಂಕಟರಮಣಪ್ಪ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗುಲ್ಬರ್ಗಾ ಲೋಕಸಭೆ ಕ್ಷೇತ್ರದಲ್ಲಿ ರೇವೂ ನಾಯಕ್ ಬೆಳಮಗಿ ಗೆದ್ದರೆ ಅವರೂ ಕೂಡಾ ಸಚಿವ ಸ್ಥಾನ ತೊರೆಯಲಿದ್ದಾರೆ. ಹಾಗೂ ಸ್ಪೀಕರ್ ಶೆಟ್ಟರ್ ಸಚಿವರಾಗುವ ಸಾಧ್ಯತೆ ಇದ್ದು, ಹಾವೇರಿ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಗೆದ್ದರೆ, ಅವರ ತಂದೆ ಸಿ ಎಂ ಉದಾಸಿ ಸಚಿವ ಸ್ಥಾನ ತೆರವು ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)