ನಕ್ಸಲರಿಂದ ಉದ್ಯಮಿಯೊಬ್ಬರಿಗೆ ಬೆದರಿಕೆ ಪತ್ರ
ಬೆಂಗಳೂರು, ಮೇ. 4 : ನಗರದ ವಾಣಿಜ್ಯೋಧ್ಯಮಿಯೊಬ್ಬರಿಗೆ ಶಂಕಿತ ನಕ್ಸಲ್ ಪಡೆಯಿಂದ ಬೆದರಿಕೆ ಪತ್ರ ಬಂದಿದೆ. ನಗರದ ಎಚ್ ಆರ್ ಬಿ ಆರ್ ಬಡಾವಣೆಯ ನಿವಾಸಿ ವೆಂಕಟಾಪತಿ ಅನ್ನುವವರು ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಮೇ ಒಂದರಂದು ನಕ್ಸಲೈಟ್ ಸಂಘಟನೆ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಬರೆದ ಪತ್ರ ಬಂದಿದ್ದು, ಐದು ಲಕ್ಷ ರುಪಾಯಿ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಹಣವನ್ನು ಸಂಪೂರ್ಣವಾಗಿ ಸಂಘಟನೆಯ ಉದ್ದೇಶಕ್ಕಾಗಿ ಉಪಯೋಗಿಸುತ್ತೇವೆ ಎಂದು ಪತ್ರದಲ್ಲಿ ಸಂಘಟನೆ ಭರವಸೆ ನೀಡಿದೆ. ನಮ್ಮ ಇದುವರೆಗಿನ ಬೇಡಿಕೆಯನ್ನು ಯಾರೂ ತಿರಸ್ಕರಿಸಲಿಲ್ಲ ಮತ್ತು ನೀವು ಕೊಡುವ ಹಣದ ನಿರೀಕ್ಷೆಯಲ್ಲಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ನಮ್ಮ ಸಂಘಟನೆಯ ನಾಯಕ್ ಅನ್ನುವ ಕಾರ್ಯಕರ್ತ ನೆಲಮಂಗಲದ ಬಳಿ ಈ ಹಣವನ್ನು ನಿಮ್ಮಿಂದ ಪಡೆದು ಕೊಳ್ಳುತ್ತಾನೆ. ನಮ್ಮ ಸಂಘಟನೆಯ ಧ್ಯೇಯೋದ್ದೇಶಕ್ಕಾಗಿ ಸಹಕರಿಸಿ, ಇದು ನಮ್ಮ ಕಡೆಯ ಪತ್ರ. ಹಣ ತಲುಪದಿದ್ದಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಏಜನ್ಸೀಸ್)