ಮುಂದಿನ ಭಾನುವಾರದಿಂದ ಸಂಡೇ ಬಜಾರ್ ಬಂದ್!
ಬೆಂಗಳೂರು, ಮೇ. 3 : ನಗರದ 'ಸಂಡೇ ಬಜಾರ್'ನಲ್ಲಿ ಇತ್ತೀಚೆಗೆ ಮಾರಕಾಸ್ತ್ರಗಳು ದೊರೆತಿರುವ ಕಾರಣ ಮುಂದಿನ ಭಾನುವಾರದಿಂದ 'ಸಂಡೇ ಬಜಾರ್' ಮಾರುಕಟ್ಟೆಯನ್ನು ಮುಚ್ಚಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಇದರಿಂದ ರೊಚ್ಚಿಗೆದ್ದಿರುವ ಸಂಡೇ ಬಜಾರ್ ವ್ಯಾಪಾರಿಗಳು ಬೀದಿಗಿಳಿದು ಇಂದು ಪ್ರತಿಭಟನೆ ನಡೆಸಿದರು. ತಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಸರೇ ಸೂಚಿಸುವಂತೆ ಸೋಮವಾರದಿಂದ ಶನಿವಾರದವರೆಗೆ ಮುಚ್ಚಿದ್ದು ಭಾನುವಾರ ಮಾತ್ರ ತೆರೆದುಕೊಳ್ಳುತ್ತಿದ್ದ ಮಾರುಕಟ್ಟೆಯಲ್ಲಿ ಸಾವಿರಾರು ವ್ಯಾಪಾರಿಗಳು ಅಂಗಡಿ ತೆರೆದುಕೊಂಡಿದ್ದಾರೆ. ಪ್ರತಿ ಭಾನುವಾರ ಭರ್ಜರಿ ವಹಿವಾಟು ನಡೆಸಲಾಗುತ್ತಿದೆ. ಇಲ್ಲಿ ಎಲೆಕ್ಟ್ರಾನಿಕ್ ಸಾಮಾನುಗಳಿಂದ ಹಿಡಿದು ಎಲ್ಲ ಬಗೆಯ ಸೆಕೆಂಡ್ ಹ್ಯಾಂಡ್ ವಸ್ತುಗಳು ಭಾರೀ ಕಡಿಮೆ ದರಕ್ಕೆ ದೊರೆಯುತ್ತವೆ.
ಪೊಲೀಸರ ಕ್ರಮದಿಂದಾಗಿ ಅನೇಕ ವರ್ತಕರು ಬೀದಿಗೆ ಬೀಳುತ್ತಾರೆ, ಜೀವನ ದುಸ್ತರವಾಗುತ್ತದೆ ಎಂಬುದು ಪ್ರತಿಭಟನೆಗಿಳಿದಿರುವ ವರ್ತಕರ ಅಳಲು. ಎಲ್ಲೋ ಒಂದೆರಡು ಮಾರಕಾಸ್ತ್ರಗಳು ಸಿಕ್ಕಿರಬಹುದು. ಹಾಗಂದ ಮಾತ್ರಕ್ಕೆ ಇಲ್ಲಿ ಅಪರಾಧಿಗಳು ಇದ್ದಾರೆಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ಅವರ ನುಡಿ.
ಮಾರಕಾಸ್ತ್ರಗಳು ಯಾರ ಬಳಿಯೇ ಇರಲಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಜವಾಬ್ದಾರಿ ತಮ್ಮದು ಎಂದು ವರ್ತಕರು ಪೊಲೀಸರಿಗೆ ನೀಡುತ್ತಿರುವ ಭರವಸೆ. ಆದರೆ, ವರ್ತಕರ ಹೇಳಿಕೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ವಾರದಿಂದ ಸಂಡೇ ಬಜಾರ್ ಇಲ್ಲ ಎನ್ನುವುದು ತಿಳಿದಿದ್ದರೂ ಅನೇಕರು ದೈನಂದಿನ ವಹಿವಾಟಲ್ಲಿ ಇಂದು ತೊಡಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications