ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಿಗೆ ನಿಷೇಧ
ಬೆಂಗಳೂರು, ಮೇ 3 : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಿಗೆ ನಿಷೇಧ ಹೇರಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ತೀವ್ರವಾಗಿ ಟೀಕಿಸಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸಲು ಕ್ರಮ ಕೈಗೊಳ್ಳುವಂತೆ ದಿನಾಂಕ 16.10.2008ರಂದು ನಾನು ಜಂಟಿ ಸದನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಪ್ರತ್ಯೇಕವಾಗಿ ಪತ್ರಗಳನ್ನು ಬರೆದಿರುತ್ತೇನೆ. ಆದರೂ ಸಹ ಈ ಕುರಿತು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ವಿಷಾದನೀಯ ಎಂದು ಚಂದ್ರು ಹೇಳಿದ್ದಾರೆ.
ಬೇರೆ ಅಂತರರಾಷ್ಟ್ರೀಯ ನಿಲ್ದಾಣಗಳಲ್ಲಿ ಅಲ್ಲಿ ಸ್ಥಳೀಯ ಭಾಷೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಿರುವುದು ಕಂಡು ಬರುತ್ತದೆ ಎಂದು ನುಡಿದಿರುವ ಅವರು 2009ನೇ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಸರ್ಕಾರವು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿ ಭಾಷಾ ಸೂತ್ರದನ್ವಯ ಕನ್ನಡವನ್ನು ಕಡ್ಡಾಯವಾಗಿ ಬಳಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ವಿನಂತಿಸಿದ್ದಾರೆ.
ಸ್ಥಳೀಯ ಭಾಷೆಯಾದ ಕನ್ನಡಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷವಾದ ಆದ್ಯತೆ ನೀಡಲು ಹಾಗೂ ಇತರ ಭಾಷೆ ಪತ್ರಿಕೆಗಳ ಜೊತೆಯಲ್ಲಿ ಸ್ಥಳೀಯ ಕನ್ನಡ ಪತ್ರಿಕೆಗಳೂ ದೊರೆಯುವಂತೆ ಕೂಡಲೇ ಕ್ರಮಕೈಗೊಳ್ಳಲು ಅವರು ಸರ್ಕಾರಕ್ಕೆ ಅಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)