ಜೆಡಿಎಸ್ ಕಾರ್ಯಕರ್ತನ ಕೊಲೆ; ಇಬ್ಬರ ಬಂಧನ
ದಾವಣಗೆರೆ, ಮೇ.1: ಜೆಡಿಎಸ್ ಕಾರ್ಯಕರ್ತ ವಿಜಯ ಕುಮಾರ್ ಕೊಂಡಜ್ಜಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹರಿಹರದ ಜೈ ಭೀಮಾನಗರದಲ್ಲಿ ಗುರುವಾರ ಸಂಜೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ವಿಜಯ ಕುಮಾರ್ ಕೊಲೆಯಾಗಿದ್ದ.
ಜೆಡಿಎಸ್ ಇಂದು ಹರಿಹರ ಬಂದ್ ಗೆ ಕರೆಕೊಟ್ಟಿತ್ತು. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಚಿತ್ರಮಂದಿರಗಳು ಮುಚ್ಚಿ ಬಂದ್ ಗೆ ಸಹಕರಿಸಿದ ಕಾರಣ ಶಾಂತಿಯುತವಾಗಿ ಅಂತ್ಯವಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಅಹಿತರ ಘಟನೆ ನಡೆಯಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಗೆ ಸಂಬಂಧಿಸಿದಂತೆ ಧಾರವಾಡ ಮತ್ತು ರಾಣಿಬೆನ್ನೂರಿನ ತಲಾ ಒಬ್ಬೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಎನ್ ಎಸ್ ರಾವ್ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರ ಸ್ವಾಮಿ ಮೃತ ವಿಜಯಕುಮಾರ್ ಮನೆಗೆ ಭೇಟಿ ನೀಡಿದ್ದರು. ವಿಜಯ ಕುಮಾರ್ ಸಾವಿಗೆ ಕಂದಾಯ ಸಚಿವ ಕರುಣಾಕರ ರೆಡ್ಡಿ ಖೇದ ವ್ಯಕ್ತಪಡಿಸಿದ್ದು ಘಟನೆಯನ್ನು ರಾಜಕೀಯಗೊಳಿಸದೆ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಹರಿಹರದಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ












Click it and Unblock the Notifications