Get Updates
Get notified of breaking news, exclusive insights, and must-see stories!

ಸಮುದ್ರ ಕಿನಾರೆಯಲ್ಲಿ ಕೀಚಕರಾದ ಕೇರಳ ಪೊಲೀಸರು

Misconduct by Kerala police on Panambur beach
ಬೇಲಿಯೇ ಎದ್ದು ಹೊಲ ಮೇಯ್ದ ಗಾದೆ ಮಾತಿನಂತೆ ಹೆಣ್ಮಕ್ಕಳನ್ನು ರಕ್ಷಿಸಬೇಕಾದ ಆರಕ್ಷಕರೇ ಭಕ್ಷಕರಾಗಿ ಪೊಲೀಸರಿಂದಲೇ ಒದೆ ತಿಂದ ಘಟನೆಯ ವಿಶ್ಲೇಷಣೆ ಇಲ್ಲಿದೆ. ಮಂಗಳೂರಿನಲ್ಲಿ ಒಂದೆಡೆ 'ನೈತಿಕ ಪೊಲೀಸ'ರ ದಬ್ಬಾಳಿಕೆ ಮಿತಿಮೀರುತ್ತಿದೆ, ಇನ್ನೊಂದೆಡೆ ನಮ್ಮ ಪೊಲೀಸರೇ ಕಣ್ಮುಚ್ಚಿ ಕುಳಿತಿದ್ದಾರೆ. ಈ ಘಟನೆ ಕೇರಳ ಸರಕಾರ ಮಾತ್ರವಲ್ಲ ನಮ್ಮ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ.

* ಚಿದಂಬರ ಬೈಕಂಪಾಡಿ, ಮಂಗಳೂರು

ಕಾನೂನು ಸುವ್ಯವಸ್ಥೆ ಕಾಪಾಡಿ ಜನತೆಗೆ ರಕ್ಷಣೆ ಕೊಡಬೇಕಾದವರೇ ಭಕ್ಷಕರಾದರೆ ಹೇಗಿರಬಹುದು ಈ ಸಮಾಜ. ಇಂಥ ಸಂಶಯ ಮೂಡಲು ಕಾರಣವೆಂದರೆ ಶಿಸ್ತಿಗೆ ಹೆಸರಾದ ಪೊಲೀಸರು ಮಂಗಳೂರು ಹೊರವಲಯದ ಪಣಂಬೂರು ಸಮುದ್ರ ಕಿನಾರೆಯಲ್ಲಿ ಕೀಚಕರಂತೆ ವರ್ತಿಸಿದ್ದು. ಉತ್ತಮ ಸಂಸ್ಕಾರ, ಗರಿಷ್ಠ ಶಿಕ್ಷಣ ಮತ್ತು ಸುಶಿಕ್ಷಿತರೆಂದು ಕರೆಯಲಾಗುವ ನೆರೆಯ ಕೇರಳದ ಪೊಲೀಸರು ಕರ್ನಾಟಕದಲ್ಲಿ ಅನೂಚಿತವಾಗಿ ವರ್ತಿಸಿರುವುದು ಕೇರಳದ ಮಂದಿಗೆ ಮತ್ತು ಅಲ್ಲಿನ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ.

ಪಣಂಬೂರು ಸಮುದ್ರ ಕಿನಾರೆಯಲ್ಲಿ ವಿಹಾರಕ್ಕೆ ಬಂದ ಹೆಣ್ಣು ಮಕ್ಕಳ ಮೈಮೇಲೆ ಕೈ ಹಾಕುವಂತಹ ದುಸ್ಸಾಹಸಕ್ಕೆ ಕೇರಳದ ಪೊಲೀಸರು ಮುಂದಾದಾಗ ಸ್ಥಳೀಯ ಪೊಲೀಸರು ಆಕ್ಷೇಪಿಸಿದಾಗಲೂ ಎಚ್ಚೆತ್ತುಕೊಳ್ಳುವ ಬದಲು ತಮ್ಮ ತಾಕತ್ತನ್ನು ತೋರಿಸಲು ಯತ್ನಿಸಿದ್ದು ನಿಜಕ್ಕೂ ಇಲಾಖೆಗೆ ಕಳಂಕ. ಪೊಲೀಸರನ್ನು ಸ್ನೇಹಿತರಂತೆ ಕಾಣಬೇಕೆಂದು ಹೇಳುವ ಈ ದಿನಗಳಲ್ಲಿ ಇಂತಹ ಕೆಟ್ಟ ನಡವಳಿಕೆಗಳು ಅಂತಹ ಮಧುರ ಸಂಬಂಧವನ್ನು ಹುಟ್ಟುಹಾಕಲು ಸಾಧ್ಯವೇ? ಇಂಥವರನ್ನು ಹೇಗೆ ತಾನೇ ನಂಬಲು ಸಾಧ್ಯ?

ಚುನಾವಣಾ ಕರ್ತವ್ಯಕ್ಕೆಂದು ಕೇರಳದಿಂದ ಬಂದಿದ್ದ ಶಿಸ್ತಿನ ಸಿಪಾಯಿಗಳು ಕಂಠ ಪೂರ್ತಿ ಕುಡಿದು ತಾವೇನು ಮಾಡುತ್ತಿದ್ದೇವೆ ಕಲ್ಪನೆಯೂ ಇಲ್ಲದೆ ವರ್ತಿಸಿದರು. ಸ್ವಚ್ಚಂದವಾಗಿ ಕಡಲತೀರದಲ್ಲಿ ವಿಹರಿಸುತ್ತಿದ್ದ ಮಹಿಳೆಯರು ಮಕ್ಕಳ ಮೇಲೆ ಕೀಚಕರಂತೆ ವರ್ತಿಸುವಾಗಲೂ ತಮ್ಮ ಖಾಕಿ ಸಮವಸ್ತ್ರ ನೆನಪಿಗೆ ಬಂದಿಲ್ಲ ಅಂದ ಮೇಲೆ ಅವರು ಎಷ್ಟು ಪಾನ ಮತ್ತರಾಗಿರಬಹುದು ಎನ್ನುವುದನ್ನು ಊಹಿಸಬಹುದು.

ಪೊಲೀಸರ ಬಗ್ಗೆ ಜನರು ಸಂಶಯ ಪಡುತ್ತಿದ್ದಾರೆ. ಠಾಣೆಗಳಿಗೆ ಹೋಗಿ ದೂರು ಕೊಟ್ಟು ನ್ಯಾಯ ಕೇಳುವ ಸ್ಥಿತಿ ಇಲ್ಲವಾಗುತ್ತಿದೆ. ದೂರು ಕೊಡಲು ಬಂದವರನ್ನೇ ಸಂಶಯದಿಂದ ನೋಡುವ ಪರಿಪಾಠ ಹೆಚ್ಚಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ದೂರು ಕೊಡಲು ಹೋದವರನ್ನೇ ಒದ್ದು ಲಾಕಪ್‌ಗೆ ಹಾಕಿದ ಅದೆಷ್ಟ್ ಉದಾಹರಣೆಗಳಿವೆ. ಸಾರ್ವಜನಿಕವಾಗಿ ರೌಡಿಗಳು ಮುಗ್ಧರನ್ನು ಅಟ್ಟಾಡಿಸಿದರೂ ಕಣ್ಣು ಮುಚ್ಚಿಕೊಂಡಿರುವ ಪೊಲೀಸ್ ಮಂದಿಯೂ ಇದ್ದಾರೆ. ಇಂತಹ ಪೊಲೀಸರಿಂದ ಜನರಿಗೆ ಅದರಲ್ಲೂ ಅನ್ಯಾಯ ಆದವರಿಗೆ ನ್ಯಾಯ ಸಿಗಲು ಸಾಧ್ಯವೇ?

ಕಾನೂನು ಕಾಪಾಡಿ ಜನರಿಗೆ ರಕ್ಷಣೆ ಕೊಡಬೇಕಾದವರು ಖಾಕಿಯ ದರ್ಪದಿಂದ ಕಾನೂನನ್ನು ಕೈಗೆತ್ತಿಕೊಂಡು ದುಸ್ಸಾಹಸಕ್ಕೆ ಮುಂದಾದರೆ ಸಮಾಜಕ್ಕೆ ರಕ್ಷಣೆ ಸಿಗಲು ಸಾಧ್ಯವೇ?ಪಣಂಬೂರು ಸಮುದ್ರ ಕಿನಾರೆಯಲ್ಲಿ ಕೇರಳ ಪೊಲೀಸರ ವರ್ತನೆಯನ್ನು ಇಲ್ಲಿ ಪ್ರಸ್ತಾಪಿಸುತ್ತಿರುವ ಉದ್ದೇಶ ಕೇರಳ ಪೊಲೀಸರ ನೈತಿಕತೆಯನ್ನು ಕುಂದಿಸುವುದಕ್ಕಾಗಿ ಅಲ್ಲ. ಇಂಥ ಕೆಟ್ಟ ನಡವಳಿಕೆ ಯಾವುದೇ ರಾಜ್ಯದ ಪೊಲೀಸರು ಮಾಡಿದರೂ ಖಂಡನೀಯ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪೊಲೀಸ್ ಕೆಲಸದಲ್ಲಿರುವವರೇ ಹೀಗೆ ನಡೆದುಕೊಂಡರೆ ಇತರರ ಪಾಡೇನು?

ಸ್ಥಳೀಯರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದಾಗಲೂ ಕೇರಳ ಪೊಲೀಸರು ತಾವು ಮಾಡಿದ್ದೇ ಸರಿ, ಅಂದರೆ ಮಹಿಳೆಯರ ಮೇಲೆ ಕೈ ಹಾಕಿದ್ದರಲ್ಲಿ ತಪ್ಪಿಲ್ಲ ಎನ್ನುವ ರೀತಿ ವಾದಕ್ಕಿಳಿದರು. ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದ ಮೇಲೂ ಆಟಾಟೋಪ ತೋರಿಸಿದ್ದು ಖಂಡನೀಯ. ತಿದ್ದಿ ಬುದ್ಧಿ ಹೇಳಬೇಕಾದವರು ತಾವು ಮಾಡಿದ ತಪ್ಪನ್ನೇ ಸಮರ್ಥಿಸಿಕೊಂಡದ್ದು ಮಾತ್ರ ಅಕ್ಷಮ್ಯ ಅಪರಾಧ. ಸ್ಥಳೀಯ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗುವ ಮೂಲಕ ಕೇರಳ ಪೊಲೀಸರು ತಕ್ಷಣಕ್ಕೆ ಸಾಹಸ ಮೆರೆದರಾದರೂ ಮುಖಮೂತಿಗೆ ಗೂಸ ಬಿದ್ದ ಮೇಲೆ ತಣ್ಣಗಾದರು.

ಪಣಂಬೂರು ಸಮುದ್ರ ಕಿನಾರೆಯಲ್ಲಿ ಮಾತ್ರ ಕೇರಳ ಪೊಲೀಸರು ಅನೂಚಿತವಾಗಿ ವರ್ತಿಸಿದ್ದರು ಎಂದುಕೊಳ್ಳಬೇಡಿ. ಕೇರಳ ಪೊಲೀಸರ ಮತ್ತೊಂದು ತಂಡ ಮೈಸೂರು ಹುಲಿ ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣದಲ್ಲೂ ಇಂತಹದ್ದೇ ದುಸ್ಸಾಹಸಕ್ಕೆ ಮುಂದಾಗಿ ಸುದ್ದಿಯಾಗಿದ್ದಾರೆ. ಶ್ರೀರಂಗ ಪಟ್ಟಣದ ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿ ನಂತರ ಎಲ್ಲಾ ವ್ಯಾಪಾರಿಗಳು ಒಗ್ಗೂಡಿ ಗೂಸಾ ಕೊಟ್ಟು ಪಾಠ ಕಲಿಸಿದ್ದಾರೆ. ಆದ್ದರಿಂದ ಕೇರಳ ಪೊಲೀಸರು ಯಾವ ರೀತಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುತ್ತಿರಬಹುದು ಎನ್ನುವುದನ್ನು ಊಹಿಸಿಕೊಳ್ಳಬಹುದು. ಕೇವಲ ಸಿನೆಮಾಗಳಲ್ಲಿ ಮಾತ್ರ ಕಾಣಲು ಸಾಧ್ಯವಾಗುವ ಇಂತಹ ದೃಶ್ಯಗಳು ಪಣಂಬೂರು, ಶ್ರೀರಂಗ ಪಟ್ಟಣದಲ್ಲಿ ಕಂಡಿರುವುದು ಆ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಸಕಾಲ.

ಇಂತಹ ದುಸ್ಸಾಹಸಗಳನ್ನು ಪೊಲೀಸ್ ಇಲಾಖೆಯವರು ಇನ್ನು ಮುಂದಾದರೂ ಮಾಡದಿರಲಿ ಎನ್ನುವ ಸದಾಶಯದ ಸಂದೇಶ ಕೇರಳದ ಪೊಲೀಸ್ ಮಂದಿಗೆ ತಲುಪಲಿ. ಅಂತೆಯೇ ಕನ್ನಡಿಗ ಪೊಲೀಸರು ಇದನ್ನು ಪಾಠವೆಂದು ತಿಳಿದುಕೊಳ್ಳಲಿ ಎನ್ನುವುದು ಮನದಾಳದ ಮಾತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+