6 ಅಪಘಾತಗಳಲ್ಲಿ 19 ಜನರನ್ನು ಬರಸೆಳದ ಜವರಾಯ
ಬೆಂಗಳೂರು, ಏ. 25 : ಕರ್ನಾಟಕದಲ್ಲಿ ಕಳೆದ ರಾತ್ರಿಯಿಂದ ಆರು ಬೇರೆ ಬೇರೆ ಪ್ರದೇಶಗಳಲ್ಲಿ ಜರುಗಿದ ಅಪಘಾತಗಳಲ್ಲಿ ಒಟ್ಟು 19 ಜನ ಅಸುನೀಗಿದ್ದಾರೆ.
ಇಲ್ಲಿಂದ 100 ಕಿ.ಮೀ. ದೂರದಲ್ಲಿರುವ ಬಾಗೆಪಲ್ಲಿ ಬಳಿ ಕಳೆದ ರಾತ್ರಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸತ್ತಿದ್ದಾರೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತರು ಆಂಧ್ರದ ಧರ್ಮಾವರಂಗೆ ಸೇರಿದವರು. ಲಾರಿ ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಮೃತರ ಕಾರಿಗೆ ಡಿಕ್ಕಿ ಹೊಡೆದಿದೆ.
ಕೋಲಾರದ ಹೊರವಲಯದಲ್ಲಿ ಸಂಭವಿಸಿದ ಇನ್ನೊಂದು ದುರ್ಘಟನೆಯಲ್ಲಿ ಆಂಧ್ರದ ಕಡಪಾದ ಡೆಪ್ಯುಟಿ ಕಲೆಕ್ಟರ್ ಆಗಿರುವ ಗಂಗಾಧರ ರೆಡ್ಡಿ, ಅವರ ಹೆಂಡತಿ ಉಮಾದೇವಿ ಮತ್ತು ಕಾರಿನ ಚಾಲಕ ಸ್ವಾಮಿ ಹತರಾಗಿದ್ದಾರೆ. ಅವರು ತೆರಳುತ್ತಿದ್ದ ಸರಕಾರಿ ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲಿಯೇ ಸತ್ತಿದ್ದಾರೆ. ಗಂಗಾಧರ ರೆಡ್ಡಿ ಅವರ ಮಗಳು ಮೇಘನಾ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಜಿಲ್ಲೆಯ ಹಿರಿಯೂರು ಬಳಿ ಇಂದು ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಹದಿನೆಂಟು ತಿಂಗಳ ಮಗು ಸೇರಿದಂತೆ ಮೂವರು ಮೃತರಾಗಿದ್ದಾರೆ. ಸತ್ತವರನ್ನು ಬಸ್ ನಿರ್ವಾಹಕ ಆನಂದ, ಪ್ರಯಾಣಿಕ ಚಿನ್ನಾಮಲೈ ಮತ್ತು ಮಗು ಪ್ರದೀಪ್ ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ 13 ಜನರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕನೇ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಇಂದು ಬೆಳಗಿನ ಜಾವ ಅದಿರು ತುಂಬಿದ ಲಾರಿ ಟ್ರಾಕ್ಟರಿಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ನಾಲ್ವರು ಅಸುನೀಗಿದ್ದಾರೆ. ಸತ್ತವರನ್ನು ವೀರಪ್ಪ, ಚಂದ್ರಗೌಡ, ಹುಬ್ಬಳ್ಳಿಯ ಯಲ್ಲಪ್ಪ ಮತ್ತು ಸಂಕನಾಳದ ವಿಠಲ ಶೆಟ್ಟಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಸತ್ತವರು ಮತ್ತು ಗಾಯಗೊಂಡವರು ಟ್ರಾಕ್ಟರಲ್ಲಿ ಪ್ರಯಾಣಿಸುತ್ತಿದ್ದರು.
ಮತ್ತೊಂದು ಅಪಘಾತದಲ್ಲಿ ಎರಡು ಲಾರಿಗಳು ಮುಖಾಮುಖಿಯಾಗಿ ರಾಣಿಬೆನ್ನೂರಿನ ಎಪಿಎಂಸಿ ಮಾರುಕಟ್ಟೆಯ ಬಳಿ ಬಸವರಾಜ ಕಿತ್ತಳೆ ಎಂಬ ಲಾರಿ ಚಾಲಕ ಹತನಾಗಿದ್ದಾನೆ. ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ಶಿಡ್ಲಘಟ್ಟದಲ್ಲಿ ನಾರಾಯಣ ಸ್ವಾಮಿ ಎಂಬುವವರು ಚಲಿಸುತ್ತಿದ್ದ ಬೈಕಿನ ಮೇಲೆ ಗೂಡ್ಸ್ ಲಾರಿ ಹರಿದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಸತ್ತಿದ್ದಾನೆ.
(ಏಜೆನ್ಸೀಸ್)












Click it and Unblock the Notifications