ಜಾರ್ಖಂಡ್ ನಲ್ಲಿ ಮತ್ತೆ ನಕ್ಸಲರ ಅಟ್ಟಹಾಸ
ರಾಂಚಿ, ಏ. 23 : ಮೊದಲ ಹಂತದ ಚುನಾವಣೆಯಲ್ಲಿ ಹಿಂಸಾಚಾರ ನಡೆಸಿದ್ದ ನಕ್ಸಲರು ಏರಡನೇ ಹಂತದ ಮತದಾನದಲ್ಲೂ ಮುಂದುವರೆಸಿದ್ದು, ಇಂದು ಬೆಳಗ್ಗೆ ಕೇಂದ್ರೀಯ ಅರೆಸೇನಾ ಪಡೆಯ ಮೇಲೆ ದಾಳಿ ನಡೆಸಿ ರೈಲು ನಿಲ್ದಾಣವನ್ನು ಸ್ಫೋಟಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನಕ್ಸಲರು ಮತ್ತು ಅರೆಸೇನಾ ಪಡೆ ಸಿಬ್ಬಂದಿಗಳ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ.
ಪಲಾಮು ಜಿಲ್ಲೆಯ ಚಿಯಾಂಕಿ ರೈಲಿ ನಿಲ್ದಾಣದಲ್ಲಿ ನೆಲೆ ಬಾಂಬ್ ಮೂಲಕ ನಕ್ಸಲರು ಬಾಂಬ್ ಸ್ಫೋಟಿಸಿದ್ದಾರೆ. ಅಲ್ಲದೇ ಸಂಚಾರ ಅಸ್ತವ್ಯಸ್ತಗೊಳಿಸುವ ಉದ್ದೇಶದಿಂದ ರಸ್ತೆ ಪಕ್ಕದಲ್ಲಿರುವ ಮತಗಳನ್ನು ಕಡೆದಿರುವ ನಕ್ಸಲರು, ಮತದಾನ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಗಿರಿಧ್ ಮತ್ತು ಡೂಮ್ರಿ ನಗರಗಳ ಸಂಪರ್ಕ ರಸ್ತೆ ಸಂಚಾರದಲ್ಲಿ ಸಂಪೂರ್ಣ ವ್ಯತ್ಯಾಯ ಉಂಟಾಗಿದೆ.
ಬುಧವಾರ ಲಾಟೆಹಾರ್ ಜಿಲ್ಲೆಯಲ್ಲಿ ರೈಲು ಅಪಹರಣ ಮಾಡಿದ್ದು ನಕ್ಸಲರು, 5 ಗಂಟೆಗಳ ನಂತರ ಬಿಡುಗಡೆಗೊಳಿಸಿದ್ದರು. ಭಾರತೀಯ ಮಾವೋವಾದಿಗಳ ಪಕ್ಷ ಲೋಕಸಭೆ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದೆ. ಜಾರ್ಖಂಡ್ ನಲ್ಲಿ ಎಂಟು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇದರಲ್ಲಿ 6 ಕ್ಷೇತ್ರಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಮೊದಲ ಹಂತದ ಚುನಾವಣೆಯಲ್ಲಿ ಬಿಎಸ್ಎಫ್ ಸಿಬ್ಬಂದಿ ಸೇರಿ 9 ಮಂದಿ ಸಾವನ್ನಪ್ಪಿದ್ದರು.
(ದಟ್ಸ್ ಕನ್ನಡ ವಾರ್ತೆ)