ಚುನಾವಣೆ ದಿನ ರಜೆ ನೀಡದಿದ್ದರೆ ಕ್ರಮ: ಹೈಕೋರ್ಟ್
ಬೆಂಗಳೂರು, ಏ. 22 : ಇದೇ 23 ರಂದು ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಬಾಷ್ ಕಂಪನಿ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಪಾಳಿ ಇರುವ ಸಿಬ್ಬಂದಿಗೆ ರಜೆ ನೀಡುವಂತೆ ನ್ಯಾಯಮೂರ್ತಿ ಹುಲುವಾಜಿ ಜಿ ರಮೇಶ್ ಆದೇಶಿಸಿದ್ದಾರೆ.
ಸಂಜೆ 5 ಗಂಟೆ ನಂತರ ಪಾಳಿ ಇರುವವರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬಹುದು ಎಂದು ನ್ಯಾಯಾಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ರಜೆ ನೀಡಲು ನಿರಾಕರಿಸಿದ ಕಂಪನಿಯ ಆಡಳಿತ ಮಂಜಳಿ ಕ್ರಮ ಪ್ರಶ್ನಿಸಿ ಮೈಕೊ ಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಇದೇ 16 ರಂದು ಆದೇಶ ಹೊರಡಿಸಿರುವ ಸರ್ಕಾರ, ಎಲ್ಲ ಇಲಾಖೆಗಳಿಗೂ ಆಯಾ ಕ್ಷೇತ್ರದಲ್ಲಿನ ಮತದಾನದ ದಿನ ರಜೆ ನೀಡುವಂತೆ ಘೋಷಿಸಿದೆ. ಆದರೆ, ತಮ್ಮ ಕಂಪನಿ ತಮಗೆ ರಜೆ ನೀಡಲು ನಿರಾಕರಿಸಿದೆ ಎಂದು ಅರ್ಜಿದಾರರು ದೂರಿದ್ದರು. ಈ ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲೂ ತಮಗೆ ರಜೆ ನೀಡದ ಕುರಿತು ಸಂಘ ಕೋರ್ಟ್ ಗಮನ ಸೆಳೆದಿದ್ದರು. ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ರಜೆ ನೀಡದಿದ್ದರೆ ಮೊಕದ್ದಮೆ ದಾಖಲು
ಚುನಾವಣೆ ದಿನದಂದು ರಜೆ ನೀಡದ ಖಾಸಗಿ ಸಂಸ್ಥೆಗಳ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕು ಪರಿಷತ್ ತಿಳಿಸಿದೆ. ಮತದಾನ ಪ್ರತಿಯೊಬ್ಬ ಪ್ರಜೆ ಹಕ್ಕು. ಚುನಾವಣೆ ದಿನ ನೌಕರರಿಗೆ ರಜೆ ನೀಡಬೇಕು. ಇಲ್ಲದಿದ್ದರೆ ಮತದಾನದ ಹಕ್ಕು ಕಸಿದುಕೊಂಡಂತಾಗಲಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ದ ಮೊಕದ್ದಮೆ ದಾಖಲಿಸಲಾಗುವುದು ಎಂದು ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್ ಕೆ ವಿವೇಕಾನಂದ ಎಚ್ಚರಿಕೆ ನೀಡಿದ್ದಾರೆ. (ಸಹಾಯವಾಣಿ ಸಂಖ್ಯೆ 080-32989007)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications