ಚುನಾವಣೆಗೆ ವ್ಯಾಪಕ ಬಂದೋಬಸ್ತ್ : ಶಂಕರ್ ಬಿದರಿ
ಬೆಂಗಳೂರು, ಏ. 22 : ನಗರ ವ್ಯಾಪ್ತಿಯ 5 ಲೋಕಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯ ಭದ್ರತೆಗೆ ಕೇಂದ್ರ ಅರೆಸೇನಾ ಪಡೆ ಸೇರಿದಂತೆ 16 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು ಎಂದುಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.
ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳ ಒಟ್ಟು 28 ವಿಧಾನಸಭೆ ಕ್ಷೇತ್ರಗಳಲ್ಲಿ 5,905 ಮಚಗಟ್ಟೆಗಳಿವೆ. ಇವುಗಳಲ್ಲಿ ಅತಿ ಸೂಕ್ಷ್ಮ 1,030, ಸೂಕ್ಷ್ಮ 1,533 ಹಾಗೂ 3,342 ಸಾಮಾನ್ಯ ಮತಗಟ್ಟೆಗಳಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ವಿವರಿಸಿದರು.
ಇದೇ ಮೊದಲ ಬಾರಿಗೆ 1,500 ಎನ್ ಸಿಸಿ ಕೆಡಟ್ ಗಳನ್ನು ಬಳಸಿಕೊಳ್ಳಲಾಗುತ್ತಿದ್ದು. ಕೇಂದ್ರ ಅರೆಸೇನಾ ಪಡೆಯ 5 ಕಂಪನಿಗಳು. 3,820 ಗೃಹರಕ್ಷಕ ದಳದ ಸಿಬ್ಬಂದಿ, 498 ಮೊಬೈಲ್ ಸಂಚಾರದಳ, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ 41 ಹಿರಿಯ ಅಧಿಕಾರಿಗಳು, 139 ಇನ್ ಪೆಕ್ಟರ್ ಗಳು, 448 ಪಿಎಸ್ ಐ ಹಾಗೂ ಎಎಸ್ ಐಗಳು, 1.515 ಮುಖ್ಯಪೇದೆ, 7,125 ಪೇದೆಗಳು ಹಾಗೂ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಲೋಕಸಭೆ ಹಿನ್ನೆಲೆಯಲ್ಲಿ ವೈನ್ ಶಾಪ್. ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಗಳಲ್ಲಿ ಎಪ್ರಿಲ್ 21 ರ ಮಧ್ಯರಾತ್ರಿಯಿಂದ ಏಪ್ರಿಲ್ 23ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಯಮ ಪಂಚತಾರಾ ಹೋಟೆಲ್ ಗಳಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಂಕರ ಬಿದರಿ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications