ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಯಿಂದ ರಾತ್ರಿ ಗಸ್ತು
ಬೆಳಗಾವಿ, ಏ. 17 : ರಾತ್ರಿ ವೇಳೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ|| ಜೆ.ರವಿಶಂಕರ ಹಾಗೂ ಚುನಾವಣಾ ವೀಕ್ಷಕರು ಗುರುವಾರ ರಾತ್ರಿಯಿಂದ ರಾತ್ರಿ ಗಸ್ತು ಆರಂಭಿಸಿದ್ದಾರೆ.
ನಿನ್ನೆ ರಾತ್ರಿ ಜಿಲ್ಲಾಧಿಕಾರಿ ರವಿಶಂಕರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ ಹಾಗೂ ಚುನಾವಣಾ ವೀಕ್ಷಕರಾದ ರಾಹುಲ ಭಂಡಾರಿ, ಅಶೋಕ ಕುಮಾರ, ಎಸ್.ಎನ್. ಪಾರವಾಲ ಮತ್ತು ಜಿಲ್ಲಾಧಿಕಾರಿಗಳ ಕೇಂದ್ರಸ್ಥಾನ ಸಹಾಯಕರಾದ ಡಾ|| ವಿಜಯಕುಮಾರ ತೋರಗಲ ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಇತರೆ ತಾಲೂಕುಗಳಲ್ಲಿ ರಾತ್ರಿ ಗಸ್ತು ನಡೆಸಿದ್ದಾರೆ.
ಬೆಳಗಾವಿ ನಗರದ ಉದ್ಯಮಬಾಗ, ಅನಗೋಳ, ವಡಗಾಂವ, ಧಾಮಣಿ, ಯಳ್ಳೂರ, ಆಂಜನೇಯ ನಗರ, ರುಕ್ಮೀಣಿನಗರ, ವಂಟಮೂರಿ ಕಾಲನಿ, ಗ್ಯಾಂಗವಾಡಿಗಳಲ್ಲಿ ಗಸ್ತು ನಡೆಸಿದರು. ಈ ಸಂದರ್ಭದಲ್ಲಿ ನಿಗದಿತ ಅವಧಿ ನಂತರ ವ್ಯಾಪಾರ ನಡೆಸುತ್ತಿದ್ದ ಲಕ್ಷ್ಮೀ ವೈನ್ಸ್ ಅಂಗಡಿಯನ್ನು ಸೀಜ್ ಮಾಡಿಸಿದರು.
ನಂತರ ಈ ತಂಡವು ಯರಗಟ್ಟಿ, ಗೋಕಾಕ, ಘಟಪ್ರಭಾ ಹಾಗೂ ಹುಕ್ಕೇರಿಗಳಿಗೆ ಭೇಟಿ ನೀಡಿತ್ತು. ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕೆಲವು ಲಾರಿಗಳನ್ನು ಸಹ ಪರಿಶೀಲಿಸಲಾಯಿತು. ಯಳ್ಳೂರ ನಾಕಾ ಹತ್ತಿರ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪೊಲೀಸ್ ಕಾನಸ್ಟೇಬಲ್ ಐನಾಪೂರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ ಅವರು ಅಮಾನತುಗೊಳಿಸಿದರು.
ಮಹಾನಗರ ಸಭೆಯ ಇಂಜನೀಯರರಾದ ಹಿರೇಮಠ ಅವರ ನೇತೃತ್ವದ ತಂಡವು ನಿನ್ನೆ ರಾತ್ರಿ ಬಿಯರ್ ಬಾಕ್ಸ್ಗಳನ್ನು ಹೊಂದಿದ್ದ ಲಾರಿಗಳನ್ನು ತಡೆ ಹಿಡಿದಿದು, ಬಿಯರಿನ ಸಾಗಾಣಿಕೆ ಕುರಿತು ಸೂಕ್ತ ದಾಖಲಾತಿಗಳು ಇದ್ದಿದ್ದರಿಂದ ನಂತರ ಈ ಲಾರಿಗಳನ್ನು ಅಬಕಾರಿ ಅಧಿಕಾರಿಗಳು ಬಿಡುಗಡೆಗೊಳಿಸಿದರು.
ಈ ಗಸ್ತು ಕಾರ್ಯವು ಚುನಾವಣೆ ಮುಗಿಯುವರೆಗೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ರವಿಶಂಕರ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬೆಳಗಾವಿ ಲೋಕಸಭೆ ಕ್ಷೇತ್ರ ಪರಿಚಯ












Click it and Unblock the Notifications