ಮುಂಬೈ ಸ್ಫೋಟ : ಕಸಬ್ ವಿಚಾರಣೆ ಇಂದು

ಅರ್ಥರ್ ಜೈಲಿನಿಂದ ಕಸಬ್ ನನ್ನು ನ್ಯಾಯಾಲಯಕ್ಕೆ ಕರೆತರುವಾಗ ನ್ಯಾಯಾಲಯದ ಸುತ್ತ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಅರ್ಥರ್ ಜೈಲಿನ ಸುತ್ತ ಕೂಡ 500 ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ನ್ಯಾಯಾಲಯಕ್ಕೆ ಕರೆತರುವ ದಾರಿಯ ಗುಂಟ ಅವನ ಮೇಲೆ ನಿಗಾ ಇಡಲು ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗಿತ್ತು.
ಕಸಬ್ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ ಸೇರಿದಂತೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. 21 ವರ್ಷದ ಕಸಬ್ ಗೆ ಮರಣ ದಂಡನೆ ಶಿಕ್ಷೆ ನೀಡುವ ಸಾಧ್ಯತೆ ಇದೆ. ಕಸಬ್ ಪರ ವಕಾಲತ್ತು ನಡೆಸಲು ಮುಂದಾಗಿದ್ದ ಅಂಜಲಿ ವಾಘ್ಮಾರೆ ಅವರ ಕಸಬ್ ಪರ ವಕಾಲತ್ತು ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ.
ತಾಯಿ ಭೇಟಿಗೆ ಅನುಮತಿ : ಈ ಮಧ್ಯೆ ತನ್ನ ತಾಯಿಯನ್ನು ಭೇಟಿಯಾಗಬೇಕೆಂಬ ಕಸಬ್ ಬೇಡಿಕೆಯನ್ನು ಮನ್ನಿಸಲಾಗಿದೆ. ಕಸಬ್ ಭೇಟಿಗಾಗಿ ಆತನ ತಾಯಿ ಪಾಕಿಸ್ತಾನದಿಂದ ಬರುತ್ತಿದ್ದಾಳೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಇನ್ನಷ್ಟು ಮಾಹಿತಿ ಒದಗಿಸುವಂತೆ ಕೇಳಿಕೊಂಡಿದೆ. ಆದರೆ, ಘಟನೆಗೆ ಭಾಗಿಯಾಗಿರುವ ಸ-ವಿವರವನ್ನು ಈಗಾಗಲೇ ಭಾರತ ಪಾಕಿಸ್ತಾನಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ನೆಲೆಯದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮುಖರ್ಜಿ ಪಾಕ್ ಸರ್ಕಾರಕ್ಕೆ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications