ಭಟ್ಕಳದಲ್ಲಿ ಕೋಮುಗಲಭೆ, ಘರ್ಷಣೆ
ಭಟ್ಕಳ, ಏ. 13 : ಜಾನುವಾರುಗಳ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಘರ್ಷಣೆ ನಡೆದು, ಒಂದು ಗುಂಪಿಗೆ ಸೇರಿದ ಎರಡು ಬೈಕ್ ಗಳನ್ನು ಸುಟ್ಟುಹಾಕಿದ್ದಲ್ಲದೆ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಭಾನುವಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಚೌಥಾನಿಯ ಜಿಮ್ ವೆಂಕಟೇಶ್ ಸಂಕಪ್ಪ ನಾಯ್ಕ, ಈತನ ಸಹೋದರ ಶಂಕರ ಸಂಕಪ್ಪ ನಾಯ್ಕ, ಅರ್ಜುನ ನಾಯ್ಕ, ಶೇಷ ಸಂಕಪ್ಪ ನಾಯ್ಕ, ಸತೀಶ ನಾಯ್ಕ ಹಾಗೂ ಚೌಥಾನಿಯ ಅಷ್ಟಾಕ್ ಹಾಗೂ ಮುಗ್ದುಂ ಕಾಲೋನಿಯ ಸುಲೇಮಾನ್ ಅವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗಿನ ಜಾವ ಕುದ್ರಿಬೀರಪ್ಪ ರಸ್ತೆಯ ಜಿಮ್ ವೆಂಕಟೇಶ ನಾಯ್ಕ ಹಾಗೂ ಆತನ ಸ್ನೇಹಿತರು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಚೌಥಾನಿಯಲ್ಲಿ ಕೆಲವು ಯುವಕರು ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದನ್ನು ಕಂಡು ಪ್ರಶ್ನಿಸಿದಾಗ ಚೌಥಾನಿಯ ಅಷ್ಟಾಕ್ ಮತ್ತು ಮುಗ್ದುಂ ಕಾಲೋನಿಯ ಸುಲೇಮಾನ್ ಎಂಬುವವರು ನಡುವೆ ಮಾತಿನ ಚಕಮಕಿ ನಡೆದಿದೆ.
ಅಷ್ಟಾಕ್ ಮತ್ತು ಸುಲೇಮಾನ್ ಗೆ ಸೇರಿದೆ ಬೈಕ್ ನ್ನು ಸುಟ್ಟು ಹಾಕಲಾಗಿದೆ. ಇದರಿಂದಾಗಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪಟ್ಟಣದಲ್ಲಿ ಶಾಂತಿ ಸ್ಥಾಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ಗುಂಪಿನ ಮುಖಂಡರನ್ನು ಸಮಾಧಾನಪಡಿಸಲಾಗಿದೆ ಎಂದು ಡಿವೈಎಸ್ ಪಿ ವೇದಮೂರ್ತಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)