ಮಂತ್ರಾಲಯ ಸುಶಮೀಂದ್ರ ಶ್ರೀಗಳು ವಿಧಿವಶ
ಬೆಂಗಳೂರು, ಏ.11 : ಕಳೆದ 15 ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಂತ್ರಾಲಯದ ಸುಶಮೀಂದ್ರ ಸ್ವಾಮೀಜಿಗಳು ಶನಿವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಶ್ರೀಗಳಿಗೆ 75 ವರ್ಷ ವಯಸ್ಸಾಗಿತ್ತು.
ಕಳೆದ ಎರಡು ತಿಂಗಳಿಂದ ಶ್ರೀಗಳ ದೇಹಸ್ಥಿತಿ ಹದಗೆಟ್ಟಿತ್ತು. ಮಂಡಿನೋವು ಹೆಚ್ಚಾಗಿದ್ದರಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಡಿ ನೋವಿನ ಜೊತೆಗೆ ಉಸಿರಾಟದ ತೊಂದರೆ ಸೇರಿಕೊಂಡಿದ್ದರಿಂದ ಶನಿವಾರ ಮಧ್ಯಾಹ್ನ ಶ್ರೀಗಳು ಅಪಾರ ಭಕ್ತ ಸಮೂಹವನ್ನು ಅಗಲಿದರು. ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ಶ್ರೀಗಳು ಅಂತ್ಯಸಂಸ್ಕಾರ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಲಿದೆ ಎಂದು ಮಂತ್ರಾಲಯ ಮಠದ ಕಾರ್ಯದರ್ಶಿ ರಾಜಗೋಪಾಲಾಚಾರ್ಯ ತಿಳಿಸಿದರು.
ಶ್ರೀಗಳ ಪಾರ್ಥೀವ ಶರೀರವನ್ನು ಈಗಾಗಲೇ ಮಂತ್ರಾಲಯಕ್ಕೆ ಸಾಗಿಸಲಾಗುತ್ತಿದ್ದು, ನಾಳೆ ನಡೆಯುವ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಸಕಲ ವ್ಯವಸ್ಥೆಗಳಿಗೂ ಕ್ರಮಕೈಗೊಳ್ಳಲಾಗಿದೆ ಎಂದು ರಾಜಗೋಪಾಲಾಚಾರ್ಯ ಹೇಳಿದರು. ಮಂತ್ರಾಲಯ ಮಠ ಅಪಾರ ಭಕ್ತ ಸಮೂಹ ಹೊಂದಿದ್ದು, ಸುಶಮೀಂದ್ರ ಶ್ರೀಗಳ ನಿಧನದಿಂದ ಭಕ್ತ ಕೋಟಿ ಶೋಕಸಾಗರದಲ್ಲಿ ಮುಳುಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications