ಪ್ಲಾಸ್ಟಿಕ್ ಮುಕ್ತ ಗುಲ್ಬರ್ಗಾ ಮಾಡಿ: ನ್ಯಾಯಾಧೀಶರ ಕರೆ

ಸಭೆಯಲ್ಲಿ ಭಾಗವಹಿಸಿದ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಾಧೀಶರುಗಳು ಗುಲಬರ್ಗಾ ನಗರವು ಬೃಹತ ನಗರವಾಗಿ ದಿನೇ ದಿನೇ ಬೆಳೆಯುತ್ತಿದ್ದು, ಪ್ಲಾಸ್ಟಿಕ್ ಅತೀಯಾದ ಬಳಕೆ ಅಘಾತಕಾರಿ ಬೆಳವಣಿಗೆಯಾಗಿದೆ. ಇದರ ದುಷ್ಪರಿಣಾಮ ಅತ್ಯಂತ ಗಂಭೀರ ಸ್ವರೂಪದಾಗಿದ್ದು, ಈ ನಿಟ್ಟಿನಲ್ಲಿ ಗುಲಬರ್ಗಾ ನಗರದಲ್ಲಿ ಪ್ಲಾಸ್ಟಿಕ್ ಮಿತ ಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿಯ ಬಗ್ಗೆ ವಿಶೇಷ ಅಭಿಯಾನ ಹಾಗೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು. ಈ ಅಭಿಯಾನ ಕಾರ್ಯಕ್ರಮ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಜರುಗುವ ಬಗ್ಗೆ ತೀವ್ರ ನಿಗಾವಹಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ತೆಗೆದುಕೊಂಡು, " ಪ್ಲಾಸ್ಟಿಕ್ ಮುಕ್ತ ಗುಲಬರ್ಗಾ " ನಿರ್ಮಾಣ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ಈ ಸಲಹೆಯು ಸೂಕ್ತವೆಂದು ಭಾವಿಸಿ, ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ ಅಂಬೇಡ್ಕರ ಅವರ ಜನ್ಮದಿನವಾದ ಏಪ್ರಿಲ್ 14 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಏಪ್ರಿಲ್ 14 ರಂದು ಬೆಳಿಗ್ಗೆ 10 ಗಂಟೆಯಿಂದ ಶರಣಬಸವೇಶ್ವರ ದೇವಸ್ಥಾನ , ಸೂಪರ್ ಮಾರ್ಕೆಟ್, ಮುಸ್ಲಿಂ ಚೌಕ ಹಾಗೂ ಬಸವನಗರ ಬಡಾವಣೆಗಳಲ್ಲಿ ಏಕಕಾಲಕ್ಕೆ ಈ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಯಿತು.
ಈ ಅಭಿಯಾನ ಪ್ರತಿ ಸ್ಥಳಗಳಲ್ಲಿ ಓರ್ವ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಾಧೀಶರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಎನ್.ಎಸ್.ಎಸ್., ಎನ್.ಸಿ.ಸಿ., ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ನ್ಯಾಯವಾದಿಗಳು, ವೈದ್ಯಾಧಿಕಾರಿಗಳು, ಇಂಜನೀಯರುಗಳು, ಆರ್ಕಿಟೆಕ್ಟರಗಳು, ವಿವಿಧ ಸಂಘ ಸಂಸ್ಥೆಗಳ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ವರ್ಗದವರು,ಸಾರ್ವಜನಿಕರು, ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಲಿದ್ದು, ಆಯ್ದ ಪ್ರದೇಶಗಳಲ್ಲಿ ಅಲ್ಲಲ್ಲಿ ಹರಡಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಕ್ರಮ ಕೈಕೊಳ್ಳಲಾಗುವುದ. ಈ ಮೂಲಕ ಪ್ಲಾಸ್ಟಿಕ್ ಮಿತ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಾದೇಶಿಕ ಆಯುಕ್ತರು, ಡಾ|| ರಜನೀಶ ಗೋಯಲ್ ಅವರು ಹೇಳಿದರು.
ಗೌರವಾನ್ವಿತ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಾಧೀಶರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಪ್ರಾದೇಶಿಕ ಆಯುಕ್ತರು, ಇಂತಹ ಜನಪರ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಂದೆ ಬಂದಿರುವುದು ನ್ಯಾಯಧೀಶರಲ್ಲಿರುವ ಸಮಾಜಿಕ ಕಳಕಳಿ ಎತ್ತಿತೋರಿಸುತ್ತದೆ. ಈಗಾಗಲೇ ಗುಲಬರ್ಗಾ ನಗರದಲ್ಲಿ ಘನತ್ಯಾಜ್ಯವಸ್ತುಗಳ ವಿಶ್ಲೇಷಣೆ ಹಾಗೂ ವಿಲೇವಾರಿ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸಹ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ಗುಲಬರ್ಗಾ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ|| ಕೆ.ಜಿ. ಜಗದೀಶ ಅವರು ಸಭೆಗೆ ಆಗಮಿಸಿದ ನ್ಯಾಯಾಧೀಶರನ್ನು, ಪ್ರಾದೇಶಿಕ ಆಯುಕ್ತರನ್ನು ವಕೀಲರ ಸಂಘದ ಪದಾಧಿಕಾರಿಗಳನ್ನು, ವಿವಿಧ ಕಾಲೇಜುಗಳ ಪ್ರಾಂಶುಪಾಲರನ್ನು, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಅಧಿಕಾರಿ ವರ್ಗದವರನ್ನು ಸ್ವಾಗತಿಸಿ, ಕಾರ್ಯಕ್ರಮದ ಧ್ಯೇಯೋದ್ದೇಶ ವಿವರಿಸಿದರು. ಉಪನ್ಯಾಸಕರಾದ ಮನೋಜಕುಮಾರ ಕೊಳ್ಳಾ ಅವರು ವಂದಿಸಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications