ಈ ಯುಗದ ರಾಜಕಾರಣಿಗಳ ಇ ಪ್ರಚಾರ ತಂತ್ರ

ನಗರವಾಸಿಗಳು, ತಂತ್ರಜ್ಞರು, ಯುವ ಜನತೆಯನ್ನು ಗುರಿಯಾಗಿರಿಸಿಕೊಂಡು ಈ ರೀತಿಯ ಪ್ರಚಾರಕ್ಕೆ ಜೆಡಿಎಸ್ ಮುಂದಾಗಿದೆ. ಬೆಂಗಳೂರಿನಲ್ಲಿ ಅಂದಾಜಿನಂತೆ ಶೇ. 80ರಷ್ಟು ಜನ ಇಂಟರ್ ನೆಟ್ ಸಂಪರ್ಕ ಹೊಂದಿದ್ದಾರೆ. ಶೇ. 95ರಷ್ಟು ಜನ ಮೊಬೈಲ್ ಬಳಸುತ್ತಿದ್ದಾರೆ. ಇದರ ಲಾಭ ಪಡೆಯಲು ಜೆಡಿಎಸ್ ಕಾರ್ಯತಂತ್ರ ರೂಪಿಸಿದ್ದು, ಸದ್ಯದಲ್ಲೇ ತನ್ನ ಅಧಿಕೃತ ವೆಬ್ ತಾಣವನ್ನು ಅನಾವರಣಗೊಳಿಸಲಿದೆ. ನಂತರ ಮತದಾರರಿಗೆ ಎಸ್ ಎಂಎಸ್ ಸಂದೇಶಗಳು, ಇ ಮೇಲ್ ಗಳ ಹಾವಳಿ ಆರಂಭವಾಗುತ್ತದೆ.
ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಪ್ರತ್ಯೇಕ ಐಟಿ ವಿಭಾಗವಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇ ಪ್ರಚಾರದಿಂದ ಪಕ್ಷಕ್ಕೆ ಸಾಕಷ್ಟು ಲಾಭವಾಯಿತು ಎನ್ನುತ್ತಾರೆ ತಜ್ಞರು. ಪ್ರತಿ ದಿನಕ್ಕೆ ಕನಿಷ್ಠವೆಂದರೂ ಸುಮಾರು 6 ಸಾವಿರಕ್ಕೂ ಅಧಿಕ ಹಿಟ್ಸ್ ಬಿಜೆಪಿಯ ವೆಬ್ ಸೈಟ್ ಪಡೆಯುತ್ತಿದೆ. ಆಡಿಯೋ ವಿಡಿಯೋ ವಿಭಾಗ, ಪ್ರತಿದಿನ ಪ್ರಚಾರ ವಿವರ, ಸುದ್ದಿ ಗೋಷ್ಠಿ ವಿವರಗಳು ಲಭ್ಯವಾಗುತ್ತಿದೆ. ಕೃಷ್ಣಭೈರೇಗೌಡರಂಥ ಟೆಕ್ಕಿ ರಾಜಕಾರಣಿ ಇದ್ದೂ ಸಹ ಇ ಪ್ರಚಾರದಲ್ಲಿ ಕಾಂಗ್ರೆಸ್ ಕೊಂಚ ಹಿಂದುಳಿದಿದೆ ಎನ್ನಬಹುದು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ವಂತ ವೆಬ್ ಸೈಟ್ ಇತ್ತೀಚೆಗೆ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಿಜೆಪಿಯ ಅನಂತ ಕುಮಾರ್ , ವಿಎಸ್ ಆಚಾರ್ಯ(ಬ್ಲಾಗ್) ಪ್ರತ್ಯೇಕ ವೆಬ್ ಸೈಟ್ ಹೊಂದಿದ್ದಾರೆ. ಪಕ್ಷದ ಚಟುವಟಿಕೆಯ ಪ್ರಚಾರಕ್ಕೆ ಪ್ರಾದೇಶಿಕ ವಲಯದ ತಾಣಗಳೂ ಚಾಲ್ತಿಯಲ್ಲಿವೆ. ಕಾಂಗ್ರೆಸ್ ಕೂಡ ತನ್ನ ಅದೇ ಹಳೇ ವೆಬ್ ಸೈಟ್ ಗೆ ಸ್ವಲ್ಪ ಸುಣ್ಣ ಬಣ್ಣ ಬಳಿದಿದೆ. ಆದರೆ, ಕಾಂಗ್ರೆಸ್ಸಿಗರು ಪ್ರತ್ಯೇಕ ವೆಬ್ ಸೈಟ್ ಅವಶ್ಯಕತೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮುಂದಿನ ಪ್ರಧಾನಿ ಅಭ್ಯರ್ಥಿ ಬಿಜೆಪಿಯ ಎಲ್ ಕೆ ಅಡ್ವಾಣಿ ಅವರ ವೆಬ್ ತಾಣ ಎಲ್ಲಾ ವೆಬ್ ಸೈಟ್ ಗಳನ್ನು ಮೀರಿಸಿದ್ದು ಮುಂಚೂಣಿಯಲ್ಲಿದೆ. ದೇಶದಾದ್ಯಂತ ದಿನಕ್ಕೊಂದರಂತೆ ಎಸ್ ಎಂಎಸ್ ಗಳನ್ನು ಬಿಜೆಪಿ ಎಲ್ಲರಿಗೂ ಕಳಿಸುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications