ಬೆಂಗಳೂರು ದಕ್ಷಿಣದಿಂದ ಅನಂತ್ ನಾಮಪತ್ರ ಸಲ್ಲಿಕೆ

ಮಧ್ಯಾಹ್ನ ನಾಮಪತ್ರ ಸಲ್ಲಿಸುವ ಮುನ್ನ ಬನಶಂಕರಿ ಎರಡನೇ ಹಂತದಲ್ಲಿರುವ ಬನಶಂಕರಿ ದೇವಿಗೆ ಪೂಜೆ ಸಲ್ಲಿಸಿದರು. ಸಚಿವ ಆರ್ ಅಶೋಕ್, ಹಿರಿಯ ನಾಯಕ ವೆಂಕಯ್ಯ ನಾಯ್ಡು ಮತ್ತಿತರರು ಅನಂತ್ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದರು. ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕ್ಯಾಪ್ಟನ್ ಗೋಪಿನಾಥ್ ಅನಂತ ಕುಮಾರ್ ಗೆ ಸ್ಪರ್ಧೆ ನೀಡಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಪ್ರೊ.ರಾಧಾಕೃಷ್ಣ ಕೂಡ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳುವುದೆಂದು ವಿಶ್ವಾಸ ವ್ಯಕ್ತಪಡಿಸಿದರು. ಭಯೋತ್ಪಾದನೆ, ಬೆಲೆ ಏರಿಕೆ ಮತ್ತು ಉತ್ತಮ ಆಡಳಿತ ಚುನಾವಣೆಯಲ್ಲಿ ಭಾರೀ ಚರ್ಚೆಯ ವಿಷಯಗಳಾಗಲಿವೆ ಎಂದು ಅನಂತ್ ನುಡಿದರು.
ಅನಂತ್ ಗೆ ಸ್ವಂತ ಸೂರಿಲ್ಲ! : ಕೇಂದ್ರದ ಮಾಜಿ ವಿಮಾನಯಾನ ಸಚಿವರಾಗಿ ಮತ್ತು ಮಾಜಿ ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನಂತ್ ಅವರ ಬಳಿ ದೇಶದ ಯಾವುದೇ ಭಾಗದಲ್ಲಿ ಸ್ವಂತ ಸೂರಿಲ್ಲ! ಇದು ಆಶ್ಚರ್ಯವಾದರೂ ಸತ್ಯ.
ನಾಮಪತ್ರ ಸಲ್ಲಿಸುವ ಮುನ್ನ ಚುನಾವಣಾಧಿಕಾರಿಗೆ ಸಲ್ಲಿಸಿದ ಆಸ್ತಿ ಮತ್ತು ಹೊರೆ ಪ್ರಮಾಣಪತ್ರದಲ್ಲಿ ಅನಂತ್ ಸ್ವಂತ ಸೂರಿಲ್ಲದಿರುವುದನ್ನು ನಮೂದಿಸಿದ್ದಾರೆ. ಅವರ ಬಳಿ ಕೇವಲ 50 ಸಾವಿರ ರು. ನಗದಿದ್ದು, ವಿವಿಧ ಬ್ಯಾಂಕುಗಳಲ್ಲಿನ ಬಾಬತ್ತು 5.03 ಲಕ್ಷ ರು. ಮಾತ್ರ. 73,700 ರು. ಬೆಲೆಯ ಒಡವೆಗಳು ಅವರ ಬಳಿ ಇವೆ. ಜೀವವಿಮೆಯಲ್ಲಿ 21 ಲಕ್ಷ ರು.ಗಳನ್ನು ಅನಂತ್ ಹೂಡಿದ್ದಾರೆ.
ಪ್ರಮಾಣಪತ್ರದ ಪ್ರಕಾರ, 4.85 ಲಕ್ಷ ರು.ಗಳನ್ನು ಕೇಂದ್ರ ಸರ್ಕಾರವೇ ದೂರವಾಣಿ ಬಿಲ್ ಹಣ ಚುಕ್ತಾ ಮಾಡಬೇಕಿದೆ. ತೆರಿಗೆ ಆದಾಯ ಇಲಾಖೆಯಿಂದ ಹೆಚ್ಚಿಗೆ ಸಂದಾಯವಾದ 780 ರು. ಕೂಡ ಇವರಿಗೆ ಬರಬೇಕಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ಅನಂತ್ ಬಳಿ ಸ್ವಂತದ ಸೂರಿಲ್ಲ. ಆದರೆ, ಹುಬ್ಬಳ್ಳಿಯಲ್ಲಿ ಇರುವ 6.35 ಲಕ್ಷ ರು. ಬೆಲೆಯ ಮನೆಯ ಮೂರನೇ ಒಂದಂಶ ಅನಂತ್ ಗೆ ಸೇರುತ್ತದೆ.
(ಏಜೆನ್ಸೀಸ್)












Click it and Unblock the Notifications