ಕರ್ನಾಟಕದಲ್ಲೊಬ್ಬ ವರುಣ ಗಾಂಧಿ,
ಬೆಂಗಳೂರು, ಮಾ. 26 : ವರುಣ್ ಗಾಂಧಿ ಪ್ರಕರಣವನ್ನು ಅರಗಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿರುವ ನಡುವೆಯೇ ಇಂತಹ ಇನ್ನೊಂದು ಪ್ರಕರಣ ರಾಜ್ಯದಲ್ಲಿ ತಲೆ ಎತ್ತಿದೆ. ಮುಸ್ಲಿಂ ವಿರೋಧಿ ಭಾಷಣದ ಹಿನ್ನಲೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಘೋಷಿತ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗ್ಡೆ ರಾಜ್ಯ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಸ್ಲಿಮರು ತಮ್ಮ ಪು೦ಡಾಟಿಕೆ ನಡೆಸಿದರೆ ಬಕ್ರೀದ್ ಅಥವಾ ಈದ್ ಮಿಲಾದ್ ಹಬ್ಬ ಆಚರಿಸುವುದು ಕಷ್ಟವಾದೀತು ಜೋಕೆ !!. ನನ್ನ ಮೇಲೆ ಈಗಾಗಲೆ 63 ಕ್ರಿಮಿನಲ್ ಕೇಸ್ ಗಳಿವೆ. ಚುನಾವಣಾ ಆಯೋಗ ಬೇಕಾದರೆ ನನ್ನ ಮೇಲೆ ಇನ್ನೊಂದು ಪ್ರಕರಣ ದಾಖಲಿಸಿಕೊಳ್ಳಲಿ. ನಿಮ್ಮ ಮತ ನಂಬಿಕೊಂಡು ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಒಂದೇ ಒಂದು ಮತ ನನಗೆ ಬೇಕಾಗಿಲ್ಲ ಎಂದು ಮುಂಡಗೋಡದಲ್ಲಿ ಇತ್ತೀಚೆಗೆ ಹೋಳಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮು ಗಲಭೆ ಅನಂತರ ಅಲ್ಲಿಗೆ ಹೋಗಿದ್ದ ಅನಂತ್ ಕುಮಾರ್ ಹೆಗ್ಡೆ ಈ ರೀತಿ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.
ಉತ್ತರ ಕನ್ನಡ (ಕೆನರಾ) ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿರುವ ಹೆಗ್ಡೆ, ತಮ್ಮ ಅತ್ಯುಗ್ರ ಭಾಷಣಗಳಿಗೆ ಹೆಸರುವಾಸಿ. ಮುಸ್ಲಿಂ ವಿರುದ್ದ ಕಿಡಿಕಾರಿದ್ದು ಇದೇ ಮೊದಲೇನಲ್ಲ. ಆದರೆ, ಚುನಾವಣ ಆಯೋಗದ ಕೆಂಗಣ್ಣಿಗೆ ಗುರಿಯಾಗಿರುವುದು ಇದೇ ಮೊದಲು. ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭಿಸಿರುವ ಇವರು ಅಲ್ಲಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)