ಸದ್ಯಕ್ಕೆ ಬಿಜೆಪಿ ಸೇರಲ್ಲ, ಸೋಮಣ್ಣ
ಬೆಂಗಳೂರು, ಮಾ. 24 : ಸದ್ಯಕ್ಕಂತೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಗೋವಿಂದರಾಜನಗರದ ಕಾಂಗ್ರೆಸ್ ಶಾಸಕ ವಿ ಸೋಮಣ್ಣ. ವಾರಾಣಸಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ 33 ನೇ ಶಾಖಾ ಮಠದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಸೋಮವಾರ ಸಂಜೆ ದೆಹಲಿಗೆ ಹಿಂತಿರುಗುತ್ತಿದ್ದಾಗ ಸೋಮಣ್ಣ ವಿಮಾನ ನಿಲ್ದಾಣದಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಸುದ್ದಿಯನ್ನೂ ನೀವೇ ಬರೆಯುತ್ತಿದ್ದೀರಿ ಎಂದು ಮಾಧ್ಯಮದವರ ಮೇಲೆ ಗೂಬೆ ಕೂರಿಸಿದ ಸೋಮಣ್ಣ, ನಾನು ಒಂದೇ ಒಂದು ಸಲ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿ ಸೇರುವೆ ಎಂದು ನಿರ್ಧರಿಸುವುದು ಏಕೆ ಎಂದು ಅವರು ಪ್ರಶ್ನಿಸಿದರು. ಸ್ವಾಮೀ, ನೀವು ಬಿಜೆಪಿ ಸೇರುವ ಸುದ್ದಿಯನ್ನು ನಾವು ಹುಟ್ಟಿಸಿದ್ದಲ್ಲ, ಬಿಜೆಪಿ ಸಚಿವರೇ ಒಂದೆರೆಡು ದಿನಗಳಲ್ಲಿ ಸೋಮಣ್ಣ ಬಿಜೆಪಿ ಸೇರೋದು ಸ್ಪಷ್ಟ ಎಂದು ಭಾನುವಾರ ಹೇಳಿದ್ದರು ಎಂದು ಪತ್ರಕರ್ತರು ಮರುಪ್ರಶ್ನೆ ಹಾಕಿದರು.
ಇಲ್ಲಾ ಸಾರ್ ಸೇರುತ್ತಿಲ್ಲ ಮುಂದಿನ ಲೋಕಸಭೆ ಚುನಾವಣೆ ಮುಗಿಯಲಿ ನಂತರ ಬೇಕಾದರೆ ಯೋಚಿಸೋಣ. ಹಾಲಿ ಲೋಕಸಭೆ ಚುನಾವಣೆಗಂತೂ ನಾನು ಸ್ಪರ್ಧಿಸುತ್ತಿಲ್ಲ. ಸದ್ಯ ಈಗ ಮಠಮಾನ್ಯಗಳ ಗುರುಜನರ ಅಧ್ಯಾತ್ಮಿಕ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಇರುವುದರಲ್ಲೇ ನನಗೆ ಹೆಚ್ಚಿನ ನೆಮ್ಮದಿ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಯುಗಾದಿಗೆ ದಿನದಂದು ಸೋಮಣ್ಣ ಬಿಜೆಪಿ ಸೇರ್ಪಡೆ












Click it and Unblock the Notifications