ವರುಣ್ ಗಾಂಧಿ ಬೆನ್ನಿಗೆ ನಿಂತ ಬಿಜೆಪಿ

ಲೋಕಸಭಾ ಚುನಾವಣೆಗೆ ವರುಣ್ ಗಾಂಧಿ ಅವರನ್ನು ಆಭ್ಯರ್ಥಿಯನ್ನಾಗಿ ಮಾಡಬಾರದೆಂದು ಚುನಾವಣಾ ಆಯೋಗ ಭಾನುವಾರ ರಾತ್ರಿ ಬಿಜೆಪಿಗೆ ಶಿಫಾರಸ್ಸು ಮಾಡಿತ್ತು ಹಾಗೂ ಅವರು ಮುಸ್ಲಿಮರ ವಿರುದ್ಧದ ದ್ವೇಷಪೂರಿತ ಭಾಷಣದಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ ಎಂದು ಆಯೋಗ ಬಿಜೆಪಿ ಪಕ್ಷದ ಮೇಲೆ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ವರುಣ್ ಗಾಂಧಿ ಸ್ಪರ್ಧೆಯನ್ನು ಹಿಂದಕ್ಕೆ ಪಡೆಯುವುದು ಸಾಧ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಜಗದೀಶ್ ಟೈಟ್ಲರ್ 1984ರಲ್ಲಿ ಸಿಖ್ ನರಮೇಧ ನಡೆಯಲು ಪ್ರಮುಖ ಪಾತ್ರವಹಿಸಿದ್ದಾರೆ. ಹಾಗೂ ಚಿತ್ರ ನಟ ಸಂಜಯ್ ದತ್ ದೇಶದ್ರೋಹಿ ಕೃತ್ಯದಲ್ಲಿ ತೊಡಗಿ ಶಿಕ್ಷೆ ಅನುಭವಿಸಿ ಬಂದಿರುವ ಅಸಾಮಿ. ಇಂತವರು ಸ್ಪರ್ಧಿಸಲು ಅರ್ಹರಾದರೆ, ತಪ್ಪೇ ಮಾಡದ, ತಪ್ಪು ಸಾಬೀತಾಗದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಸ್ಪರ್ಧಿಸುವುದರಲ್ಲಿ ತಪ್ಪೇನಿದೆ. ಅವರ ಮಾಡಿರುವ ತಪ್ಪಾದರೂ ಏನಿದೆ ಎಂದು ಬಿಜೆಪಿ ವಕ್ತಾರ ಬಲ್ ಬೀರ್ ಸಿಂಗ್ ಆಯೋಗವನ್ನು ಪ್ರಶ್ನಿಸಿದ್ದಾರೆ.
ಆಯೋಗ ಪಕ್ಷಪಾತಿ ನೀತಿ ಅನುಸರಿಸುತ್ತಿದೆ ಎಂದು ದೂರಿದ ಅವರು, ಚುನಾವಣಾ ಆಯುಕ್ತ ನವೀನ ಚಾವ್ಲಾ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಸಂಬಂಧ ಹೇಗಿದೆ ಎಂಬುದು ನನಗೆ ಗೊತ್ತಿದೆ. ಚಾವ್ಲಾ ಅವರು ಸೋನಿಯಾ ಗಾಂಧಿ ಆಪ್ತರು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಬಿಜೆಪಿಯ ಇನ್ನೊಬ್ಬ ವಕ್ತಾರ ಪ್ರಕಾಶ್ ಜಾವೇದ್ ಕರ್ ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿದೆ, ತೀರ್ಪಿನ ನಂತರ ಮುಂದಿನ ವಿಚಾರ. ಸದ್ಯ ಪಿಲಿಭಿತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರೇ ಸ್ಪರ್ಧಿಸುತ್ತಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಸ್ಪರ್ಧಿಸುವಂತಿಲ್ಲ ಆಯೋಗ












Click it and Unblock the Notifications