ಭಾರತದಲ್ಲಿ ರಸ್ತೆ ಸುರಕ್ಷತೆ ಅತ್ಯಂತ ಶೋಚನೀಯ
ಗುಲಬರ್ಗಾ,ಮಾ.21: ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣಾ ಯೋಜನೆಯಡಿ ಲೋಕೋಪಯೋಗಿ, ಬಂದರು, ಒಳನಾಡು , ಜಲಸಾರಿಗೆ ಇಲಾಖೆಯ ಇಂಜಿನಿಯರುಗಳಿಗಾಗಿ ಶುಕ್ರವಾರ ಗುಲಬರ್ಗಾದಲ್ಲಿ ಒಂದು ದಿನದ ರಸ್ತೆ ಸುರಕ್ಷತಾ ಜಾಗೃತಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಸ್ಟ್ರೇಲಿಯಾ ರಸ್ತೆ ಪ್ರಾಧಿಕಾರದ ರಸ್ತೆ ಸುರಕ್ಷತಾ ವಿಶೇಷಜ್ಞ ಡಾ.ಜಿಮ್ ಜಾರ್ವಿನ್ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಪ್ರಪಂಚದಲ್ಲಿಯೇ ಭಾರತದಲ್ಲಿ ರಸ್ತೆ ಸುರಕ್ಷತಾ ಪರಿಸ್ಥಿಯು ಅತ್ಯಂತ ಶೋಚನೀಯವಾಗಿದ್ದು, ಜಗತ್ತಿನಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇ. 6 ರಷ್ಟು ಭಾರತದಲ್ಲಿ ಸಂಭವಿಸುತ್ತವೆ. ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದ 2006ರಲ್ಲಿ 6,500 ಜನರು ಮೃತಪಟ್ಟಿದ್ದು, 50,000 ಜನರು ಗಾಯಾಳುಗಳಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತ ವಿಶ್ಲೇಷಣಾ ವಿಧಾನ (ರೋಡ್ ಎಕ್ಸಿಡೆಂಟ್ ಅನಾಲಿಸಿಸ್ ಸಿಸ್ಟೆಮ್) ಯೋಜನೆಯನ್ನು ವಿಕ್ರೋಡ್ಸ್ ಆಸ್ಟ್ರೇಲಿಯಾದ ರಸ್ತೆ ಪ್ರಾಧಿಕಾರ ಮತ್ತು ಐ.ಬಿ.ಎಸ್. ಸಾಫ್ಟ್ವೇರ್ ಸರ್ವಿಸೆಸ್ಗಳ ಸಹಯೋಗದಲ್ಲಿ ಮೂರು ಹಂತದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ದೀರ್ಘ ರಸ್ತೆ ಸುರಕ್ಷತಾ ನಿರ್ವಹಣೆಯ ಕೋರ್ಸು ಮತ್ತು ರಾಸ್ ಮೂಲಕ ತರಬೇತಿ ಕಾರ್ಯಾಚರಣೆ ವಿಧಾನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ರಸ್ತೆ ಬಳಸುವವರಿಗೆ ರಸ್ತೆ ಸುರಕ್ಷತೆ ಹಾಗೂ ನೀತಿ ನಿಯಮಾವಳಿ ಕುರಿತು ವಿವಿಧ ಮಾಧ್ಯಮಗಳ ಮೂಲಕ ತಿಳುವಳಿಕೆ ನೀಡಬೇಕು. ರಸ್ತೆ ಬಳಕೆದಾರರಿಗಾಗಿ ಇಂಜಿನಿಯರಿಂಗ್, ಪೊಲೀಸ್ ಕಾರ್ಯಾಚರಣೆ, ಸುರಕ್ಷಿತ ವರ್ತನೆಯ ಆಂದೋಲನ ಏರ್ಪಡಿಸಬೇಕು. ಉತ್ತಮ ಡಾಟಾ ಸಂಗ್ರಹಣಾ ವ್ಯವಸ್ಥೆಯು ರಸ್ತೆ ಸುರಕ್ಷತೆಯ ಬೆನ್ನೆಲುಬು ಆಗಿದೆ. ಇಂಜಿನಿಯರುಗಳು, ಶಿಕ್ಷಣ ನೀಡುವವರು, ಕಾರ್ಯಾಚರಣೆ ಮಾಡುವವರು ಮತ್ತು ಮೌಲ್ಯಮಾಪಕರು ರಸ್ತೆ ಸುರಕ್ಷತೆಯಲ್ಲಿ ಅಡ್ಡಿಯಾಗುವ ಸಮಸ್ಯೆ ಮತ್ತು ಪರಿಹಾರ ಹಾಗೂ ಪರಿಣಾಮಕಾರಕ ಕಾರ್ಯಾಚರಣೆಯತ್ತ ತೀವ್ರ ನಿಗಾ ವಹಿಸಬೇಕು ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications