ಸಂವಾದ: ರಾಜ್ಯ ಸರ್ಕಾರ ಹಾಗೂ ದೆಹಲಿ ಕನ್ನಡಿಗರು
ಬೆಂಗಳೂರು, ಮಾ, 20: ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ ಹಾಗೂ ಕರ್ನಾಟಕ ಭವನ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21 ರಂದು ಸಂಜೆ 4.30 ಗಂಟೆಗೆ ದೆಹಲಿಯ ರಾವ್ ತುಲಾರಾಂ ಮಾರ್ಗ್ ಸೆಕ್ಟರ್ -12, ಆರ್.ಕೆ. ಪುರಂ ಕರ್ನಾಟಕ ಸಂಘದ ಸಭಾಂಗಣದಲ್ಲಿ "ಕರ್ನಾಟಕ ಸರ್ಕಾರ ಮತ್ತು ದೆಹಲಿ ಕನ್ನಡಿಗರು ಒಂದು ಸಂವಾದ " ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು ಈ ಸಂವಾದ ಕಾರ್ಯಕ್ರಮವನ್ನು ಉದ್ಫಾಟಿಸಲಿದ್ದಾರೆ. ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತ ಅರವಿಂದ್ ಜಿ.ರಿಸಬುಡ್ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸಮೂರ್ತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಘುನಂದನ ಜಿ. ನಡದೂರ್ ಹಾಗೂ ವಾರ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಆಶಯ ಭಾಷಣ ಮಾಡಲಿದ್ದಾರೆ.
ಈ ಸಂವಾದ ಕಾರ್ಯಕ್ರಮದಲ್ಲಿ ಶರತ್ ಎಸ್. ಜವಳಿ, ಡಾ. ವೆಂಕಟಾಚಲ ಹೆಗಡೆ, ಡಾ. ಎಚ್. ಎಸ್. ಶಿವಪ್ರಕಾಶ್, ಡಾ. ಪುರುಷೋತ್ತಮ ಬಿಳಿಮಲೆ, ಸುಗುಣಾ ನಾಗೇಶ್, ಕೆ.ಎಸ್. ಸಚ್ಚಿದಾನಂದಮೂರ್ತಿ, ಸಿ.ವಿ. ಗೋಪಿನಾಥ್, ಎಸ್. ಕೆ. ಕುಲಕರ್ಣಿ, ಡಿ. ಉಮಾಪತಿ ಹಾಗೂ ಉಷಾ ಭರತಾದ್ರಿ ಅವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ 'ಗುಲಾಬಿ ಟಾಕೀಸ್' ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications