ಬೆಂಗಳೂರಿನಲ್ಲಿ ವಿಶೇಷ ಭದ್ರತಾ ಪಡೆ ಸ್ಥಾಪನೆ, ಚಿದು
ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 600 ಸಿಬ್ಬಂದಿಗಳನ್ನು ಒಳಗೊಂಡಿರುವ ವಿಶೇಷ ಭದ್ರತಾ ಪಡೆ ಇನ್ನೂ ಮುಂದೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದೆ. ಶೀಘ್ರದಲ್ಲಿ ಪಡೆಯನ್ನು ರವಾನಿಸಲಾಗುವುದು ಎಂದರು. ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ವಿಧಾನಸೌಧ, ಸರ್ಕಾರಿ ಆಸ್ಪತ್ರೆಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಗಿ ಬಂದೋಬಸ್ತ್ ನಿಯೋಜಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದರು.
ಮುಂಬೈ ಭಯೋತ್ಪಾದನೆ ನಂತರ ಬೆಂಗಳೂರಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಭಾರಿ ಪ್ರಯತ್ನ ಮಾಡಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಬಂಧ ಕೇಂದ್ರ ಸರ್ಕಾರಕ್ಕೆ ಅನೇಕ ಸಲ ಮನವಿ ಮಾಡಿಕೊಂಡಿದ್ದರು.
ಭದ್ರತೆ ಕುರಿತು ಕಳೆದ ಜನವರಿ ತಿಂಗಳಲ್ಲಿ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜ್ಯಕ್ಕೆ ಎನ್ ಎಸ್ ಜಿ ಘಟಕ ಸ್ಥಾಪಿಸಬೇಕು ಎಂದು ಯಡಿಯೂರಪ್ಪ ಬಲವಾಗಿ ಮನವಿ ಮಾಡಿಕೊಂಡಿದ್ದರು. ಆಗ ಚಿದಂಬರಂ ಸಾಫ್ಟವೇರ್ ಕಂಪನಿಗಳ ತಾಣವಾಗಿರುವ ಬೆಂಗಳೂರಿಗೆ, ಹೆಚ್ಚಿನ ಭದ್ರತಾ ಪಡೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)