ನಾಲ್ಕು ದಿನದ ಪುಟ್ಟ ಪಾಪುವನ್ನು ಬಾವಿಗೆಸೆದ ಅಪ್ಪ
ಚೆನ್ನೈ, ಮಾ. 14 : ಹೆಂಡತಿ ತನ್ನ ಜೊತೆಗಿರಲಾಗುತ್ತಿಲ್ಲವೆಂಬ ಕಾರಣವೊಡ್ಡಿ ಪತಿರಾಯನೊಬ್ಬ ವಿವೇಚನೆ ಕಳೆದುಕೊಂಡು ತನ್ನ ನಾಲ್ಕು ದಿನಗಳ ಹಸುಳೆಯನ್ನು ಅಮಾನುಷವಾಗಿ ಬಾವಿಗೆಸೆದು ಕೊಂದ ಘಟನೆ ಇಲ್ಲಿ ಗುರುವಾರ ರಾತ್ರಿ ಜರುಗಿದೆ.
ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಇಂಜಿನಿಯರಾಗಿರುವ 28 ವರ್ಷದ ನಿರಂಜನ ಕುಮಾರ್ ಸ್ಥೀಮಿತ ಕಳೆದುಕೊಂಡು ಮಾಡಿದ ಕೃತ್ಯದಿಂದಾಗಿ ಹೆಂಡತಿ ಜೊತೆಗಿರುವ ಬದಲು ಕಂಬಿ ಎಣಿಸುತ್ತಿದ್ದಾರೆ. ಚೆನ್ನೈ ಮೂಲದವರಾದ ನಿರಂಜನ್ ಚೈನ್ನೈನಲ್ಲಿರುವ ತಮ್ಮ ಮನೆಯಲ್ಲಿರುವ ಬಾವಿಯಲ್ಲಿ ಕೂಸನ್ನು ಎಸೆದಿದ್ದಾರೆ.
ಎರಡು ವರ್ಷಗಳ ಹಿಂದೆಯಷ್ಟೇ ಅವರು 22 ವರ್ಷದ ಸಂಗೀತಾ ಎಂಬುವವರನ್ನು ಮದುವೆಯಾಗಿದ್ದರು. ಮಗು ಮಾಡಿಕೊಳ್ಳುವ ವಿಷಯದಲ್ಲಿ ಅವರಿಬ್ಬರಲ್ಲಿ ಭಿನ್ನಾಭಿಪ್ರಾಯವಿತ್ತು. ಹೆಂಡತಿ ಗರ್ಭಿಣಿಯಾದಾಗ ಅಪ್ರತಿಭರಾಗಿದ್ದರು. ಗರ್ಭಪಾತ ಮಾಡಿಸಿಕೊಳ್ಳುವಂತೆ ಹೆಂಡತಿಗೆ ದುಂಬಾಲು ಬೀಳುತ್ತಿದ್ದರು. ಹೆಂಡತಿ ಬಗ್ಗದಿದ್ದಾಗ ವಿಧಿಲಿಲ್ಲದೆ ಹೆರಿಗೆಗಾಗಿ ಚೆನ್ನೈಗೆ ಸಂಗೀತಾಳನ್ನು ಕಳಿಸಿಕೊಟ್ಟಿದ್ದರು.
ಹೆಣ್ಣು ಮಗು ಹುಟ್ಟಿದ ಮೇಲೆ ಮಗುವನ್ನು ನೋಡುವ ನೆಪದಲ್ಲಿ ಚೆನ್ನೈಗೆ ಧಾವಿಸಿದ ನಿರಂಜನ್ ಮಗುವನ್ನು ನೀರುಪಾಲು ಮಾಡಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಆರೋಪ ಹೊರಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications