ಹಿಂದೂಗಳೆ ನೀತಿ ನಿಯಮ ಪಾಲಿಸಿ, ತಾಲಿಬಾನ್
ನವದೆಹಲಿ, ಮಾ. 10 : ಪಾಕಿಸ್ತಾನ ಸರ್ಕಾರದ ವಿರುದ್ಧ ಸೆಡ್ಡು ಹೊಡೆಯುವ ಮೂಲಕ ಒಂದೊಂದೇ ಭಾಗವನ್ನು ಹಂತಹಂತವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ತಾಲಿಬಾನಿ ಉಗ್ರರ ಕಣ್ಣೀಗ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಬಿದ್ದಿದೆ. ತಾಲಿಬಾನ್ ನಿಯಮ ಪಾಲಿಸಿ ಇಲ್ಲವೇ ದೇಶ ಬಿಟ್ಟು ತೊಲಗಿ ಎಂಬ ಆದೇಶ ಉಗ್ರರಿಂದ ಹೊರಬಿದ್ದಿದೆ. ಇದರಿಂದಾಗಿ ಜೀವಭಯಕ್ಕೆ ತುತ್ತಾಗಿರುವ ಹಿಂದುಗಳು ಪಾಕಿಸ್ತಾನದಿಂದ ಪಲಾಯನ ಮಾಡತೊಡಗಿದ್ದಾರೆ.
ಹೀಗೆ ಉಗ್ರರ ಜೀವ ಬೆದರಿಕೆಗೆ ಹೆದರಿ ಪಾಕ್ ನ ಪೇಶಾವರ ಪ್ರಾಂತ್ಯದಿಂದ 35 ಹಿಂದುಗಳ ಗುಂಪೊಂದು ಅಮೃತಸರಕ್ಕೆ ಬಂದಿದೆ. ಭಾರತೀಯ ಪೌರತ್ವ ನೀಡಿ ಬದುಕು ಕಲ್ಪಿಸಿ ಎಂದು ಸರ್ಕಾರಕ್ಕೆ ಮೊರೆಇಟ್ಟಿದೆ. ಇದು ಪಾಕಿಸ್ತಾನವೆಂಬ ತಾಲಿಬಾನಿಗಳ ನಾಡಿನಲ್ಲಿ ಶೇ. 2 ರಷ್ಟು ಇರುವ ಹಿಂದುಗಳ ಎದುರಿಸುತ್ತಿರುವ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಪೇಶಾವರದ ಅಕ್ಕಪಕ್ಕದ ಪ್ರಾಂತ್ಯಗಳಲ್ಲಿ ತಾಲಿಬಾನಿಗಳು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡು ನಿಧಾನವಾಗಿ ತಮ್ಮ ನೀತಿ ನಿಯಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಪುರುಷರು ಗಡ್ಡ ಬಿಡಬೇಕು, ಮಹಿಳೆಯರು ಶಾಲೆಗಳಿಗೆ ಹೋಗಬಾರದು ಎಂಬ ಕಾನೂನನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಈ ನಿಯಮಗಳಿಗೆ ಇಲ್ಲಿನ ಹಿಂದುಗಳನ್ನು ಒಳಪಡಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications