ಟಿವಿ, ವಾಷಿಂಗ್ ಮೆಷಿನ್ ಗೃಹಬಳಕೆ ವಸ್ತುಗಳು ಅಗ್ಗ
ಬೆಂಗಳೂರು, ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರೀಸಾಮಾನ್ಯನಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸದೆ ಇಂದು ಮಂಡಿಸಿದ ಬಜೆಟ್ ನಲ್ಲಿ ಹಲವು ರಿಯಾಯಿತಿಗಳನ್ನು ಘೋಷಿಸಿದ್ದಾರೆ. ಶೇ.3ರ ಬಡ್ಡಿದರದಲ್ಲಿ ವಾಣಿಜ್ಯ ಬ್ಯಾಂಕ್ ಗಳಿಂದ ರೈತರು ಸಾಲ ಪಡೆಯುವ ಅವಕಾಶವನ್ನು ಕಲ್ಪಿಸಿದ್ದಾರೆ. ಸರಕಾರಿ ನೌಕರರ ಮನೆ ಬಾಡಿಗೆ, ಭತ್ಯೆಯನ್ನು ಹೆಚ್ಚಿಸಿ ಎಲ್ಲ ವರ್ಗದ ಜನರನ್ನು ಓಲೈಸಲಾಗಿದೆ. ಸಂಪೂರ್ಣ ಕನ್ನಡಮಯವಾದ ಬಜೆಟ್ ಕರಡು ಪತ್ರಿ ಸಿದ್ಧಪಡಿಸಿದ್ದು, ಬಿಜೆಪಿ ಸರ್ಕಾರದ ಕನ್ನಡಪರ ಕಾಳಜಿಗೆ ಸಾಕ್ಷಿಯಾಯಿತು.
ಬಜೆಟ್ ನಲ್ಲಿ ರಿಯಾಯಿತಿ
ರು.100 ಮತ್ತು ಅದಕ್ಕಿಂತಲೂ ಕಡಿಮೆ ಬೆಲೆಯ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಟಿವಿ, ವಾಷಿಂಗ್ ಮೆಷಿನ್, ಗೃಹ ಬಳಕೆ ವಸ್ತುಗಳ ಮೇಲೆ ಶೇ.4 ರ ತೆರಿಗೆ ರಿಯಾಯಿತಿ ನೀಡಲಾಗಿದೆ. ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು ಮಾಸಿಕ ವೇತನ ರು.5000 ದಿಂದ ರು.10,000 ಕ್ಕೆ ಏರಿಸಲಾಗಿದೆ. ಖಾಸಗಿ ಶಾಲೆಗಳಿಗೆ, ಕಾಲೇಜುಗಳಿಗೆ ವೃತ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ.
ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಳ
'ಎ 'ಶ್ರೇಣಿ ನಗರದಲ್ಲಿ ವಾಸ ಮಾಡುವ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ಶೇ.20 ಹೆಚ್ಚಿಸಿದರೆ, ಬಿ ವರ್ಗದ ನಗರಗಳಿಗೆ ಶೇ.15, ಸಿ, ಡಿ ಮತ್ತು ಇ ವರ್ಗದ ನಗರಗಳಿಗೆ ಕ್ರಮವಾಗಿ ಶೇ.9.6 ಮತ್ತು ಶೇ. 5ರ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಸೌಲಭ್ಯ ನೀಡಲಾಗಿದೆ.
ಪತ್ರಕರ್ತರ ವರಮಾನ ಮಿತಿ ಹೆಚ್ಚಳ
ನಿವೃತ್ತ ಪತ್ರಕರ್ತರು ಮಾಸಾಶನ ಪಡೆಯಲು ಇರುವ ವಾರ್ಷಿಕ ವರಮಾನ ಮಿತಿಯನ್ನು ರು.5,000 ದಿಂದ ರು. 50,000ಕ್ಕೆ ಹೆಚ್ಚಿಸಲಾಗಿದೆ. ಯಡಿಯೂರಪ್ಪನವರು ತಮ್ಮ ಬಜೆಟ್ ನಲ್ಲಿ ಪತ್ರಕರ್ತರಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ರಾಜ್ಯದ ಎಲ್ಲಾ ಕೇಂದ್ರಗಳಿಗೆ ಸುಸಜ್ಜಿತ ಪತ್ರಿಕಾ ಭವನ, ಮಾಧ್ಯಮ ಕೇಂದ್ರ ನಿರ್ಮಾಣಕ್ಕೆ ತಲಾ ರು. 25 ಲಕ್ಷ ಅನುದಾನ, ಯಶಸ್ವಿನಿ ಸಹಕಾರ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಕಾರ್ಯನಿರತ ಪತ್ರಕರ್ತರು ಹಾಗೂ ನಿವೃತ್ತ ಪತ್ರಕರ್ತರನ್ನು ಒಳಪಡಿಸುವುದು. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸೇರಿದಂತೆ ಹಲವಾರು ಕೊಡುಗೆಗಳನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಇಳಿಕೆ
ಕೃಷಿ ಭೂಮಿ ಸೇರಿದಂತೆ ಎಲ್ಲ ಬಗೆಯ ಸ್ಥಿರಾಸ್ತಿಗಳ ಮಾರಾಟ ಮತ್ತಿತರ ವರ್ಗಾವಣೆಗಳ ಶುಲ್ಕವನ್ನು ಶೇ. 7.5 ರಿಂದ ಶೇ. 6 ಕ್ಕೆ ಇಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು












Click it and Unblock the Notifications