ಚಿತ್ರಕಲಾ ಶಿಕ್ಷಕರ ಕೂಗಿಗೆ ಸ್ಪಂದಿಸದ ಸರ್ಕಾರ

ರಾಜ್ಯದಲ್ಲಿ 2883 ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಪ್ರಾಥಮಿಕ ಶಾಲೆಗಳಲ್ಲಿಯೂ ಎರಡು ಹಂತಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಅಖಿಲ ಕರ್ನಾಟಕ ಚಿತ್ರಕಲಾ ಪದವೀಧರರ ಸಂಘದ ನೇತೃತ್ವದಲ್ಲಿ ಜನವರಿ 21ರಿಂದ ಉಪವಾಸ ಸತ್ಯಾಗ್ರಹವನ್ನು ಶಿಕ್ಷಕರು ನಡೆಸುತ್ತಿದ್ದಾರೆ.
ಶಿಕ್ಷಕ ಮತ್ತು ಶಿಕ್ಷಕಿಯರ ವಯೋಮಿತಿ ಮೀರುತ್ತಿದ್ದು ಸರ್ಕಾರ ಕೂಡಲೆ ನೇಮಕ ಮಾಡಿಕೊಳ್ಳಬೇಕೆಂದು ಧರಣಿ ನಿರತ ಶಿಕ್ಷಕರು ಆಗ್ರಹಿಸಿದರು. ತಕ್ಷಣ ನೇಮಕ ಮಾಡಿಕೊಳ್ಳದಿದ್ದರೆ ಅನೇಕ ಶಿಕ್ಷಕರು ನೌಕರಿಯಿಂದ ವಂಚಿತರಾಗಬೇಕಾಗುತ್ತದೆ ಎಂದು ನೊಂದು ನುಡಿದರು. ಚಿತ್ರಕಲಾ ಶಿಕ್ಷಕರ ಬೇಡಿಕೆಗಳಿಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಖಾಲಿ ಇರುವ ಜಾಗವನ್ನು ತುಂಬಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಶಿಕ್ಷಕರ ನೇಮಕಕ್ಕೆ ಹಿಂದುಮುಂದು ನೋಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯ ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರು ಘೋಷಣೆಗಳನ್ನು ಕೂಗಿದರು. ಶಾಲೆಗಳಲ್ಲಿ ಚಿತ್ರಕಲೆ ಕಲಿಸಲು ಶಿಕ್ಷಕರಿಲ್ಲ. ಇದರಿಂದ ವಿದ್ಯಾರ್ಥಿಗಳಿಗಾಗುತ್ತಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರ ವಿದ್ಯಾರ್ಥಿಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications