ಕಾಗೇರಿಗೆ ಸ್ಪೀಕರ್ ಪಟ್ಟ; ಶೆಟ್ಟರ್ ಸಂಪುಟಕ್ಕೆ
ಬೆಂಗಳೂರು, ಫೆ. 18: ವಿಧಾನಮಂಡಲದ ಬಜೆಟ್ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಫೆ. 20 ರಂದು ಬಜೆಟ್ ಮಂಡನೆ ಆಗಲಿದೆ. ಈ ಅಧಿವೇಶನದ ನಂತರ ಹಾಲಿ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗುವ ಸ್ಪೀಕರ್ ಸ್ಥಾನವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತುಂಬುವ ಸಾಧ್ಯತೆಯಿದೆ. ಹಿರಿಯ ಮುಖಂಡರ ಆದೇಶದ ಮೇರೆಗೆ ಕಾಗೇರಿ ಅವರು ಸಚಿವ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ ಹೈ ಕಮಾಂಡ್, ಉತ್ತರ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಬಲ್ಲ ಸಮರ್ಥ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ನಿರ್ಧರಿಸಿದೆ. ಇದರಿಂದ ಉತ್ತರ ಭಾಗದ ಜನರ ಒಲವು ಪಕ್ಷದ ಕಡೆಗೆ ತಿರುಗಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಮುಖಂಡರ ಆಲೋಚನೆಯಾಗಿದೆ. ಮಹತ್ವದ ಬಜೆಟ್ ಅಧಿವೇಶನದ ನಂತರ ಬಿಜೆಪಿ ಪಾಳೆಯದಲ್ಲಿ ಬದಲಾವಣೆಯ ಗಾಳಿ ಬೀಸಲಿರುವುದಂತೂ ಸತ್ಯ.
(ದಟ್ಸ್ ಕನ್ನಡ ವಾರ್ತೆ)
ಫೆಬ್ರವರಿ 20ರಂದು ಆಯವ್ಯಯ ಮಂಡನೆ












Click it and Unblock the Notifications