ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಗೆ ತಮಿಳುನಾಡು ಅಸ್ತು
ಚೆನ್ನೈ ಫೆ 18: ಕನ್ನಡದ ಕ್ರಾಂತಿಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಹಿಂದೇಟು ಹಾಕುತ್ತಿದ್ದ ತಮಿಳುನಾಡು, ಈಗ ಇದ್ದಕ್ಕಿದ್ದಂತೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪ್ರತಿಮೆ ಸ್ಥಾಪನೆಗೆ ಸಿದ್ಧವಿರುವುದಾಗಿ ಘೋಷಿಸಿದೆ. ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫ್ಯಾಕ್ಸ್ ಸಂದೇಶ ರವಾನಿಸಿದೆ.
ಮಂಗಳವಾರ ತಮಿಳುನಾಡು ಹಣಕಾಸು ಸಚಿವ ಅನ್ಬಳಗನ್ ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಚೆನ್ನೈ ನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಕರುಣಾನಿಧಿ ಸಮ್ಮತಿಸಿದ್ದಾರೆ. ಪ್ರತಿಮೆ ಸ್ಥಾಪನೆಗೆ ಸರಕಾರ ಸಿದ್ಧವಿದೆ, ನಮ್ಮ ನಿರ್ಧಾರದ ಬಗ್ಗೆ ಕರ್ನಾಟಕ ಸರಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದು ಪ್ರಕಟಿಸಿದರು.
ತಮಿಳುನಾಡಿನ ನಿರ್ಧಾರಕ್ಕೆ ಪ್ರತಿಯಾಗಿ ಯಡಿಯೂರಪ್ಪ, ಚೆನ್ನೈ ನಲ್ಲಿ ಸೂಕ್ತ ಸ್ಥಳ ಕೊಟ್ಟರೆ ಮಾತ್ರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸರಕಾರ ಸ್ಥಳ ನೀಡಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸಂದೇಶ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
1991 ರಲ್ಲಿ ಬೆಂಗಳೂರಿನ ತಮಿಳು ಸಂಘ ತಮಿಳು ಕ್ರಾಂತಿಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದಾಗಿ ಬೆಂಗಳೂರು ಪಾಲಿಕೆಗೆ ಮನವಿ ಸಲ್ಲಿಸಿತ್ತು. ಪಾಲಿಕೆ ಒಪ್ಪಿಗೆ ಕೂಡ ಸೂಚಿಸಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಚೆನ್ನೈ ನಲ್ಲಿ ಕನ್ನಡ ಕ್ರಾಂತಿಕವಿ ಸರ್ವಜ್ಞನ ಪ್ರತಿಮೆ ಸ್ಥಾಪಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಠ ಹಿಡಿದವು. ಆ ಬೇಡಿಕೆಗೆ ತಮಿಳುನಾಡು ಸರಕಾರ ಒಪ್ಪಿಕೊಳ್ಳದ ಕಾರಣ ವಿವಾದ ಆರಂಭವಾಗಿತ್ತು.
ಒಟ್ಟಿನಲ್ಲಿ ಒಂದೂವರೆ ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿದ್ದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿವಾದಕ್ಕೆ ತೆರೆ ಬೀಳುವ ಲಕ್ಷಣ ಕಂಡುಬಂದಿದೆ.
(ಏಜೆನ್ಸೀಸ್)
ಹೊಗೇನಕಲ್ ವಿವಾದ ; ಕರ್ನಾಟಕದ ಮುಖಕ್ಕೆ ಸುಣ್ಣ











Click it and Unblock the Notifications