ಹಿಜಡಾಗಳ ಪ್ರತಿಭಟನಾ ಮೆರವಣಿಗೆ
ಬೆಂಗಳೂರು, ಫೆ. 14 :ಕಳೆದ ಅನೇಕ ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ನಮಗೆ ಸಮಾಜದಲ್ಲಿ ನಮಗೂ ಒಂದು ಸ್ಥಾನ ಕೂಡಿ. ಶ್ರೀಸಾಮಾನ್ಯನಂತೆ ನೆಮ್ಮದಿಯಿಂದ ಬದುಕಲು ನಮಗೂ ಅವಕಾಶ ಮಾಡಿಕೊಡಿ ಎನ್ನುವ ಬೇಡಿಕೆಗಳು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಜಡಾಗಳು ಶುಕ್ರವಾರ ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಿಜಡಾಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಿಂದ ಪ್ರತಿಭಟನೆ ಹೊರಟರು. ರಾಜ್ಯಾದ್ಯಂತ ವಿವಿಧ ಪ್ರದೇಶಗಳಿಂದ ಆಗಮಿಸಿದ ಹಿಜಡಾಗಳು ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರ ಬೇಡಿಕೆಗಳಲ್ಲಿ ಮುಖ್ಯವಾಗಿ ಹಿಜಡಾಗಳಿಗೂ ಸಮಾಜದಲ್ಲಿ ಒಂದು ಯೋಗ್ಯ ಸ್ಥಾನ ಕೊಡಿ, ಶ್ರೀಸಾಮಾನ್ಯನಂತೆ ನೆಮ್ಮದಿಯಿಂದ ಬದುಕಲು ನಮಗೂ ಅವಕಾಶ ಮಾಡಿ ಕೊಡಿ, ಮಹಿಳೆಯರಿಗೆ ಹಾಗೂ ಪುರುಷರಿಗೆ ಸಿಗುತ್ತಿರುವ ಶಾಸನ ಬದ್ಧ ಅಷ್ಟೂ ಸವಲತ್ತುಗಳನ್ನು ನಮಗೂ ನೀಡಿ, ಹಿಜಡಾಗಳಿಗೆ ಪ್ರತ್ಯೇಕ ಶಾಸನ ರೂಪಿಸಿ, ಪಡಿತರ ಕಾರ್ಡ್ ನೀಡುವುದು, ಮತದಾನದ ಹಕ್ಕು ನೀಡುವುದು, ಆರೋಗ್ಯ ವಿಮೆ ನೀಡುವುದು, ಪೊಲೀಸರಿಂದ ಆಗುತ್ತಿರುವ ಕಿರುಕುಳವನ್ನು ತಡೆಯುವುದು, ಆಶ್ರಯ ಮನೆಗಳನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಳೆದ ಅನೇಕ ವರ್ಷಗಳಿಂದ ಹಿಜಡಾ ಎಂದು ಕರೆಸಿಕೊಳ್ಳುತ್ತಿರುವ ನಾವುಗಳು ತೀವ್ರ ಶೋಷಣೆ ಒಳಗಾಗಿದ್ದೇವೆ. ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತದೆ. ಪೊಲೀಸ್ ಇಲಾಖೆಯಂತೂ ನಮ್ಮ ಮೇಲೆ ಭಾರಿ ದೌರ್ಜನ್ಯ ನಡೆಸುತ್ತದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. ಪಿಂಕ್ ಬಣ್ಣವೂ ಸೇರಿದಂತೆ ಥರಥರಾವರಿ ಬಣ್ಣದ ಸೀರೆಗಳನ್ನು ಧರಿಸಿದ್ದ ಸಾವಿರಾರು ಹಿಜಡಾಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications