ಉಗ್ರರನ್ನು ಶಿಕ್ಷಿಸಿ ಎಂದು ಪಾಕ್ ಗೆ ಪ್ರಣಬ್ ತಾಕೀತು
ನವದೆಹಲಿ, ಫೆ. 13 : ಮುಂಬೈ ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನ ತೋರಿಸುತ್ತಿರುವ ಸಹಕಾರ ಉತ್ತಮ ಬೆಳವಣಿಗೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಕ್ ನಲ್ಲಿ ಅಡಗಿರುವ ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ವಿಧಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಪಾಕ್ ಸರ್ಕಾರವನ್ನು ಒತ್ತಾಯಿಸಿದರು.
ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿಂದು ಅವರು ಮಾತನಾಡಿದರು. ಮುಂಬೈ ದಾಳಿಯನ್ನು ಪಾಕ್ ನೆಲದ ಒಂದು ಭಾಗದಿಂದ ರೂಪಿಸಲಾಗಿದೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಅದಕ್ಕೆ ಸಂಬಂಧಿಸಿದ ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಭಾರತ ಕಳುಹಿಸಿ ಕೊಡಲಿದೆ. ಒಟ್ಟಿನಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪಾಕಿಸ್ತಾನಕ್ಕೆ ಆಗ್ರಹಿಸಿದರು.
ಆರಂಭದಲ್ಲಿ ಪಾಕಿಸ್ತಾನ ಮುಂಬೈ ಭಯೋತ್ಪಾದನೆ ಪಾಕ್ ನೆಲದಿಂದಲೇ ನಡೆದಿದೆ ಎನ್ನುವ ಅಂಶವನ್ನು ಒಪ್ಪದಿರುವುದು ದುರದೃಷ್ಟಕರ ಸಂಗತಿ. ನಂತರ ದಿನಗಳಲ್ಲಿ ಭಾರತ ಸಲ್ಲಿಸಿದ ಎಲ್ಲ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸಿದ ಪಾಕಿಸ್ತಾನ ದಾಳಿ ನಡೆದಿರುವುದು ಪಾಕ್ ನಿಂದಲೇ ಎಂದು ಒಪ್ಪಿಕೊಂಡಿತು. ಇದೊಂದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕ್ ಭಾರತಕ್ಕೆ ಸಹಕಾರ ನೀಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.
ಭಾರತದೊಂದಿಗೆ ಎಂತಹ ಬಾಂಧವ್ಯ ಇಟ್ಟಕೊಳ್ಳಬೇಕು ಎನ್ನುವುದು ಪಾಕಿಸ್ತಾನ ನಿರ್ಧರಿಸಲಿ. ಭಯೋತ್ಪಾದನೆಯನ್ನು ಮಟ್ಟ ಹಾಕುವ ವಿಷಯದಲ್ಲಿ ಭಾರತ ಎಂದಿಗೂ ಹಿಂದೆ ಸರಿಯದು. ಪಾಕ್ ನೆಲದಲ್ಲಿರುವ ಎಲ್ಲ ಉಗ್ರಗಾಮಿ ಸಂಘಟನೆಗಳ ಮುಖಂಡರನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಲಿ ಎಂದು ಅವರು ಪಾಕ್ ಗೆ ತಾಕೀತು ಮಾಡಿದರು.
ಪಾಕ್ ಮೇಲೆ ನಮ್ಮ ವೈಷಮ್ಯವಿಲ್ಲ. ಅಲ್ಲಿನ ಜನತೆಯೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಲು ಆಸಕ್ತಿ ಹೊಂದಿದೆ. ಇದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ನಡೆದುಕೊಳ್ಳಬೇಕು. ಭಾರತ ಭಾವನೆಯನ್ನು ಪಾಕ್ ಸರ್ಕಾರ ಅರಿಯಲಿ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಂಬೈ ದಾಳಿಗೆ ಪಾಕ್ ನೆಲದಿಂದಲೇ ಸಂಚು











Click it and Unblock the Notifications